ಚನ್ನಪಟ್ಟಣ: ಸೂಕ್ಷ್ಮ ಹಾಗೂ ಸಂಕುಚಿತ ಮನೋಭಾವದ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತೆಗೆಯುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ವಿ.ವೆಂಕಟಸುಬ್ಬಯ್ಯ ಚೆಟ್ಟಿ ಅಭಿಪ್ರಾಯಪಟ್ಟರು.
ಪಟ್ಟಣದ ಬಾಲು ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಶಾಲೆಯ ಎಲ್.ಕೆ.ಜಿ. ಹಾಗೂ ಯು.ಕೆ.ಜಿ ಮಕ್ಕಳ ವೇಷಭೂಷಣ ಸ್ಪರ್ಧೆ ಹಾಗೂ ಸಾಂಸ್ಕತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಪ್ರತಿಭೆಗೆ ಪೋಷಕರು ಸಹ ನೀರೆರೆಯಬೇಕು. ಕೇವಲ ಓದಿನ ವಿಚಾರದಲ್ಲಿ ಒತ್ತಡ ಹೇರಬಾರದು ಎಂದರು.
ಪ್ರತಿಯೊಬ್ಬ ಮಕ್ಕಳಲ್ಲಿಯೂ ಎಲೆಮರೆಕಾಯಿಯಂತೆ ಸುಪ್ತವಾದ ಪ್ರತಿಭೆಗಳಿರುತ್ತವೆ. ಅಂತಹ ಪ್ರತಿಭೆಗಳನ್ನು ಸಂಬಂಧಿತ ತರಗತಿಯ ಶಿಕ್ಷಕವರ್ಗ ಪತ್ತೆ ಮಾಡಿ ಅವರಿಗೆ ಆತ್ಮವಿಶ್ವಾಸ ತುಂಬಿ ಅವರ ಪ್ರತಿಭೆಗೆ ವೇದಿಕೆ ಕಲ್ಪಿಸಿಕೊಡಬೇಕು. ವೇದಿಕೆಗಳಲ್ಲಿ ಸಿಗುವ ಪ್ರೋತ್ಸಾಹ, ಸಹಕಾರ ಮುಂದಿನ ಅವರ ಪ್ರತಿಭೆಗೆ ಮಾರ್ಗದರ್ಶನವಾಗುತ್ತದೆ. ಇದಕ್ಕೆ ಪೋಷಕರು ಸಹ ಸಹಕಾರ ನೀಡಬೇಕು ಎಂದರು.
ಶಾಲೆಯ ಜಂಟಿ ಕಾರ್ಯದರ್ಶಿ ಬಾಲಸುಬ್ರಮಣ್ಯಂ ಮಾತನಾಡಿ, ಮಕ್ಕಳ ಪ್ರತಿಭೆಗೆ ಬೆಳಕು ನೀಡಿ ಪ್ರೋತ್ಸಾಹ ನೀಡಿದಾಗ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡಲು ಸಹಾಯಕವಾಗುತ್ತದೆ. ಪೋಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಶಾಲೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ.ಕೆ.ಪಿ.ಶೈಲಜಾ, ಕವಿತಾ, ಮುಖ್ಯಶಿಕ್ಷಕರಾದ ಮೆಹರ್ ಸುಲ್ತಾನ್, ಶಬಾನಾಬೇಗಂ ಹಾಗೂ ಶಿಕ್ಷಕರು ಹಾಜರಿದ್ದರು. 50 ಕ್ಕೂ ಹೆಚ್ಚು ಮಕ್ಕಳು ಛೇದ್ಮವೇಷ ಧರಿಸಿ ಪ್ರತಿಭೆ ಅನಾವರಣ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.