ADVERTISEMENT

ಪಡಿತರ ಚೀಟಿ ಹಿಂಭಾಗ ಯೇಸು, ಹಿಂದೂ ದೇವತೆಗಳ ಭಾವಚಿತ್ರ!

ಲ್ಯಾಮಿನೇಷನ್‌ ವೇಳೆ ಯಡವಟ್ಟು: ಶ್ರೀರಾಮಸೇನೆ ದೂರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 5:15 IST
Last Updated 20 ಅಕ್ಟೋಬರ್ 2022, 5:15 IST
ಪಡಿತರ ಚೀಟಿಯೊಂದರ ಹಿಂಭಾಗ ಇರುವ ಏಸುಕ್ರಿಸ್ತನ ಚಿತ್ರ
ಪಡಿತರ ಚೀಟಿಯೊಂದರ ಹಿಂಭಾಗ ಇರುವ ಏಸುಕ್ರಿಸ್ತನ ಚಿತ್ರ   

ರಾಮನಗರ: ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹಾಗೂ ಉಯ್ಯಂಬಳ್ಳಿ ಹೋಬಳಿಯ ಹಲವು ಗ್ರಾಮಗಳ ಪಡಿತರ ಚೀಟಿಗಳ ಹಿಂಭಾಗದಲ್ಲಿರುವ ಯೇಸು ಕ್ರಿಸ್ತನ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ದೊಡ್ಡಾಲಹಳ್ಳಿ ಗ್ರಾಮದ ಸ್ಟುಡಿಯೊವೊಂದರಲ್ಲಿ ರೇಷನ್‌ ಕಾರ್ಡ್‌ ಲ್ಯಾಮಿನೇಷನ್‌ ಮಾಡಿಕೊಡುವಾಗ ದೇವರ ಚಿತ್ರ ಬಳಸಿರುವುದು ವಿವಾದಕ್ಕೆ ಕಾರಣವಾಗಿದೆ. ಕೇವಲ ಯೇಸು ಚಿತ್ರ ಮಾತ್ರವಲ್ಲದೆ ಹಿಂದೂ ದೇವತೆಗಳ ಚಿತ್ರವನ್ನೂ ಮುದ್ರಿಸಲಾಗಿದೆ.

ಪಡಿತರ ಚೀಟಿ ಹಿಂದೆ ಯೇಸು ಕ್ರಿಸ್ತನ ಫೋಟೊ ಮುದ್ರಿಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಶ್ರೀರಾಮ ಸೇನೆಯ ಪದಾಧಿಕಾರಿಗಳು ಬುಧವಾರ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ.

ADVERTISEMENT

ಇವು ಸರ್ಕಾರದ್ದಲ್ಲ: ‘ಸರ್ಕಾರ ವಿತರಿಸುವ ಪಡಿತರ ಚೀಟಿಗಳು ರಾಜ್ಯದಾದ್ಯಂತ ಏಕರೂಪದಲ್ಲಿದ್ದು, ಅದರಲ್ಲಿ ಯಾವುದೇ ದೇವರ ಚಿತ್ರ ಬಳಸಲು ಅವಕಾಶ ಇಲ್ಲ. ಇದು ಅಧಿಕೃತ ಕಾರ್ಡ್‌ ಅಲ್ಲ. ಲ್ಯಾಮಿನೇಷನ್‌ ವೇಳೆ ಕೆಲವರು ಈ ರೀತಿ ಮಾಡಿದ್ದಾರೆ’ ಎಂದು ಆಹಾರ ಇಲಾಖೆ ಉಪನಿರ್ದೇಶಕಿ ರಮ್ಯಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಈ ರೀತಿ ಕಾರ್ಡ್ ವಿತರಣೆ ಆಗಿಲ್ಲ. ಅಂತಹ ಕಾರ್ಡ್‌ ಬಳಕೆಯೂ ಕಂಡುಬಂದಿಲ್ಲ. ಇದರ ಫೋಟೊಗಳು ಎಲ್ಲಿಂದ ಬಂದವು ಎಂಬ ಬಗ್ಗೆ ಪೊಲೀಸ್‌ ತನಿಖೆಗೆ ಸೂಚಿಸಿದ್ದೇನೆ. ಬಳಕೆ ಕಂಡುಬಂದಲ್ಲಿ ಕಾನೂನು ಕ್ರಮ ವಹಿಸುತ್ತೇವೆ’ ಎಂದು ಕನಕಪುರ ತಹಶೀಲ್ದಾರ್‌ ವಿ.ಆರ್. ವಿಶ್ವನಾಥ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.