ADVERTISEMENT

ಕನಕಪುರ: ಕೊಚ್ಚಿ ಹೋಗಿದ್ದ ವೈದ್ಯನ ಶವ ಪತ್ತೆ

ಶವ ಪರೀಕ್ಷೆ ನಡೆಸಿ, ಹುಟ್ಟೂರಿಗೆ ಕೊಂಡೊಯ್ದ ಕುಟುಂಬ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 4:15 IST
Last Updated 15 ಸೆಪ್ಟೆಂಬರ್ 2022, 4:15 IST
ಕನಕಪುರ ಮಾವತ್ತೂರು ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದ ವೈದ್ಯ ಡಾ.ಎಂ.ಎಸ್‌.ಸಚಿನ್‌ ಅವರ ಶವವನ್ನು ಕೊಂಡೊಯ್ಯುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ 
ಕನಕಪುರ ಮಾವತ್ತೂರು ಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದ ವೈದ್ಯ ಡಾ.ಎಂ.ಎಸ್‌.ಸಚಿನ್‌ ಅವರ ಶವವನ್ನು ಕೊಂಡೊಯ್ಯುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ    

ಕನಕಪುರ: ನಿರಂತರ ಕಾರ್ಯಾಚರಣೆ ಮೂಲಕ ಮಾವತ್ತೂರು ಕೆರೆಯಲ್ಲಿ ಕಾಲುಜಾರಿ ಬಿದ್ದು ಕೊಚ್ಚಿಹೋಗಿದ್ದ ವೈದ್ಯ ಎಂ.ಎಸ್. ಸಚಿನ್ ಅವರ ಮೃತದೇಹವನ್ನು ಹೊರತೆಗೆಯುವಲ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬುಧವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮೃತ ವೈದ್ಯ ಸಚಿನ್ ತನ್ನ ಸ್ನೇಹಿತರಾದ ಡಾ. ನಿರಂಜನ್ ಮತ್ತು ಡಾ. ಜಾವೇದ್ ಅಹಮ್ಮದ್ ಅವರ ಜತೆಗೂಡಿ ಸೋಮವಾರ ಸಂಜೆ ಮಾವತ್ತೂರು ಕೆರೆ ವೀಕ್ಷಣೆಗೆಂದು ಹೋಗಿದ್ದರು. ಈ ವೇಳೆ ಕೆರೆಯ ಕೋಡಿ ಮೇಲೆ ನಡೆದುಕೊಂಡು ಹೋಗುವಾಗ ಮದ್ಯದ ನಶೆಯಲ್ಲಿದ್ದ ಸಚಿನ್ ಕಾಲುಜಾರಿ ನೀರಿಗೆ ಬಿದ್ದು,
ನಾಪತ್ತೆಯಾಗಿದ್ದರು.

ಸೋಮವಾರ ಸಂಜೆಯಿಂದ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ, ಸ್ಥಳೀಯ ಮುಳುಗು ಪರಿಣತರ ಜತೆಗೂಡಿ ಮೃತದೇಹದ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ತಂಡದ ಜತೆಗೂಡಿ ಬುಧವಾರ ಮತ್ತೆ ಶವ ಪತ್ತೆ ಕಾರ್ಯಾಚರಣೆ ಕೈಗೊಳ್ಳ
ಲಾಗಿತ್ತು. ಆದರೆ, ಮಧ್ಯಾಹ್ನ 3 ಗಂಟೆ ವೇಳೆ ಮೃತದೇಹವು ತನ್ನಿಂತಾನೇ ಮೇಲೆ ಬಂದಿದ್ದು, ಅದನ್ನು ಹೊರತೆಗೆದಿದ್ದಾರೆ.

ADVERTISEMENT

ಈ ವೇಳೆ ಮೃತ ಡಾ.ಎಂ.ಎಸ್‌.ಸಚಿನ್‌ ಅವರ ತಂದೆ, ಅಣ್ಣ ಮತ್ತು ತಂಗಿ ಘಟನಾ ಸ್ಥಳಕ್ಕೆ ಬಂದಿದ್ದರು. ಶವ ದೊರೆತ ನಂತರ ಮೃತದೇಹವನ್ನು ಡಾ.ಚಂದ್ರಮ್ಮ ದಯಾನಂದ ಸಾಗರ್‌ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದ್ದು, ಅವರ ಹುಟ್ಟೂರು ಬಾದಾಮಿಗೆ ತೆಗೆದುಕೊಂಡು ಹೋಗಲಾಗಿದೆ.

ಮೆಡಿಕಲ್‌ ಕಾಲೇಜಿನ ಡೀನ್‌, ಪ್ರಾದ್ಯಾಪಕರು, ಮೆಡಿಕಲ್‌ ವಿದ್ಯಾರ್ಥಿಗಳು ಮೃತ ವೈದ್ಯನ ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.