ಮಾಗಡಿ: ಪ್ರತಿ ವರ್ಷದಂತೆ ಈ ಬಾರಿಯೂ ಬಸವ ಜಯಂತಿ ದಿನವಾದ ಬುಧವಾರ ತಾಲ್ಲೂಕಿನ ಕರ್ಲಹಳ್ಳಿ ಬಸವಣ್ಣ ರಥೋತ್ಸವ ಭಾರಿ ವಿಜೃಂಭಣೆಯಿಂದ ನಡೆಯಿತು.
ದೇಗುಲದಲ್ಲಿ ಬಸವೇಶ್ವರ ಸ್ವಾಮಿಗೆ ಪೂಜೆ ನೆರವೇರಿಸಿದ ನಂತರ ರಥದಲ್ಲಿ ಉತ್ಸವ ಮೂರ್ತಿ ಇರಿಸಿ ಮೆರವಣಿಗೆಯಲ್ಲಿ ತರಲಾಯಿತು. ಪಟದ ಕುಣಿತ, ತಮಟೆ, ಹೊಂಬಾಳೆ ಕಳಶ ಸೇರಿದಂತೆ ಕಲಾ ತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ವರ್ಣರಂಜಿತ ಗೋಪುರ, ಪಡಸಾಲೆ, ತೊಟ್ಟಿಲು ಸೇವೆ ನಡೆದವು. ರೈತರು ತಮ್ಮ ದನ,ಕರುಗಳಿಗೆ ಪೂಜೆ ಸಲ್ಲಿಸಿ, ಶೃಂಗರಿಸಿ ದೇಗುಲಕ್ಕೆ ಕರೆತಂದು ಪ್ರದಕ್ಷಿಣೆ ಹಾಕಿದರು.
ಭಕ್ತರಿಗೆ ಮುದ್ದೆ ಹಾಲಸಿನ ಹುಳಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಬೆಳಗಿನಿಂದ ಸಂಜೆಯವರೆಗೂ ದಾಸೋಹ ನಡೆಯಿತು. ಸಾವಿರಾರು ಭಕ್ತರು ಪ್ರಸಾದ ಸೇವಿಸಿದರು.
ಕರ್ಲಹಳ್ಳಿ ಬಸವಣ್ಣ ದೇಗುಲದ ಸುತ್ತ ದನಕರುಗಳೊಂದಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರೆ ಬಸವಣ್ಣ ತಮ್ಮ ಜಾನುವಾರುಗಳನ್ನು ಯಾವುದೇ ಕಾಯಿಲೆ ಬರದಂತೆ ಕಾಪಾಡುತ್ತಾನೆ ಎಂಬ ನಂಬಿಕೆ ಇಲ್ಲಿಯ ಜನರಲ್ಲಿದೆ. ಕರು ಹಾಕಿದ ನಂತರ ಹಸುಗಳನ್ನು ಇಲ್ಲಿಗೆ ತಂದು ಪೂಜೆ ಸಲ್ಲಿಸಿ, ಬಸವಣ್ಣನಿಗೆ ಮೊದಲ ಗಿಣ್ಣು ಹಾಲು ಅರ್ಪಿಸುವುದು ವಾಡಿಕೆ.
ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್, ಜೆಡಿಎಸ್ನ ಹೇಳಿಗೆಹಳ್ಳಿ ಎಚ್.ಜಿ.ತಮ್ಮಣ್ಣಗೌಡ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ವಿಜಯಕುಮಾರ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಸುರೇಶ್ ಸೇರಿದಂತೆ ಅನೇಕರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.