ರಾಮನಗರ: ಜಿಲ್ಲೆಯಲ್ಲಿ ಮಂಗಳವಾರ ಇಬ್ಬರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ ಒಟ್ಟಾರೆ 25ಕ್ಕೆ ಏರಿಕೆಯಾಗಿದೆ.
ಚನ್ನಪಟ್ಟಣ ತಾಲೂಕಿನ 25 ವರ್ಷದ ಮಹಿಳೆಗೆ ಪಾಸಿಟಿವ್ ಬಂದಿದ್ದು, ಈಕೆ ಪ್ರಕರಣ ಸಂಖ್ಯೆ 6138 ಸೋಂಕಿತ ವ್ಯಕ್ತಿಯ ಸಹೋದರಿ ಆದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಿದ್ದ ಸಹೋದರಿ ಮನೆಗೆ ಸೋಂಕಿತ (6138 )ಯುವಕ ಹೋಗಿ ಬಂದಿದ್ದ. ಆತನಿಗೆ ಸೋಂಕು ಧೃಢಪಟ್ಟ ಹಿನ್ನೆಲೆಯಲ್ಲಿ ಸೋಂಕಿತನ ಸಹೋದರಿ ಹಾಗೂ ಭಾವ ಚನ್ನಪಟ್ಟಣದ ಹೊನ್ನಾಯಕನಹಳ್ಳಿ ಕೇಂದ್ರದಲ್ಲಿ ಕ್ವಾರಂಟೈನ್ ನಲ್ಲಿದ್ದರು.
ಕನಕಪುರ ತಾಲೂಕಿನಲ್ಲಿ ಮಂಗಳವಾರ40 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಈತ ಪಿ-6038 ಸೋಂಕಿತರ ದ್ವಿತೀಯ ಸಂಪರ್ಕದಲ್ಲಿ ಇದ್ದು ಕ್ವಾರಂಟೈನ್ಗೆ ಒಳಪಟ್ಟಿದ್ದರು. ಈತ ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಕೆಲಸಕ್ಕೆ ಇದ್ದರು ಎನ್ನಲಾಗಿದೆ. ಈ ಇಬ್ಬರನ್ನೂ ಸದ್ಯ ಕೋವಿಡ್ ರೆಫರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಇದಲ್ಲದೆ, ಬಿಡದಿಯ ಹಳೆ ಆವರಗೆರೆ ರಸ್ತೆಯಲ್ಲಿ ಆಂಧ್ರದಿಂದ ಬಂದ ಸೋಂಕಿತನೋರ್ವ ವಾಸವಿದ್ದು, ಇದೀಗ ಆತ ತಮ್ಮ ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಈತನ ಜತೆ ಇದ್ದ ಮತ್ತೊಬ್ಬ ಯುವಕನನ್ನು ಸದ್ಯ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಮಾಗಡಿಯ ತಿರುಮಲೆ ಬಡಾವಣೆಯಲ್ಲಿನ ವ್ಯಕ್ತಿಯೊಬ್ಬರಿಗೂ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಅಧಿಕಾರಿಗಳು ಇದನ್ನು ಧೃಡಪಡಿಸಿಲ್ಲ.
ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ
ಬಿಡದಿಯಲ್ಲಿ ಸೋಂಕಿನಿಂದ ಮೃತಪಟ್ಟಿದ್ದ ತರಕಾರಿ ವ್ಯಾಪಾರಿಯ ಅಂತ್ಯಕ್ರಿಯೆಯು ಮಂಗಳವಾರ ಕೋವಿಡ್-19 ನಿಯಮಾವಳಿಯಂತೆ ನಡೆಯಿತು. ಸುಮಾರು8 ಅಡಿ ಆಳದ ಗುಂಡಿಯಲ್ಲಿ ಶವವನ್ನು ಹೂಳಲಾಯಿತು. ತಹಶೀಲ್ದಾರ್ ಮತ್ತು ಕುಟಂಬ ಸದಸ್ಯರ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳು ನಡೆದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.