ಕನಕಪುರ: ಪರಿಸರ ಮತ್ತು ಪ್ರಕೃತಿ ಮನುಷ್ಯನ ಜೀವನಾಡಿಗಳಾಗಿದ್ದು ಅವುಗಳನ್ನು ಸಂರಕ್ಷಿಸಿ ಉಳಿಸುವ ಕೆಲಸ ಪ್ರತಿಯೊಬ್ಬ ನಾಗರೀಕನೂ ಮಾಡಬೇಕಿದೆ. ಯುವ ಸಮುದಾಯ ಈ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೆ.ಪುರುಷೋತ್ತಮ್ ಹೇಳಿದರು.
ಕನಕಪುರ ಯೂತ್ ಹಾಸ್ಟಲ್ ವತಿಯಿಂದ ಗಾಣಕಲ್ ಸರ್ಕಾರಿ ಶಾಲೆಯಲ್ಲಿ ಆಯೋಜನೆ ಮಾಡಿದ್ದ, ಸರ್ಕಾರಿ ಶಾಲೆಯ 45 ವಿದ್ಯಾರ್ಥಿಗಳಿಗೆ ಉಚಿತ ಹೊಲಿದ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಮನುಷ್ಯ ಆರೋಗ್ಯವಾಗಿ ಇರಬೇಕಾದರೆ ಉತ್ತಮ ಪರಿಸರ, ಪರಿಶುದ್ಧವಾದ ಗಾಳಿ, ನೀರು ಸಿಗಬೇಕು. ಅಗತ್ಯಕ್ಕೆ ತಕ್ಕಂತೆ ಅರಣ್ಯ ನಾಡು ಮಾಡುತ್ತಿದ್ದೇವೆ. ಇದ್ದ ಮರಗಿಡಗಳನ್ನು ಕಡಿದು ಪರಿಸರ ನಾಶ ಮಾಡುತ್ತಿದ್ದೇವೆ. ಇವೆಲ್ಲವೂ ಪರಿಸರಕ್ಕೆ ಮಾರಕವಾಗಿ ಮುಂದೆ ದೊಡ್ಡ ಗಂಡಾಂತರ ಎದುರಾಗಲಿದೆ ಎಂದು ಎಚ್ಚರಿಸಿದರು.
ವೈಎಚ್ಐಸಿ ರಾಜ್ಯ ಘಟಕದ ಕೋಶಾಧ್ಯಕ್ಷ ಬಿ.ಎಸ್.ಮಂಜುನಾಥ್ ಮಾತನಾಡಿ, ‘ಪ್ರಕೃತಿಯ ಸೃಷ್ಟಿಯಲ್ಲಿ ನಾವೆಲ್ಲರೂ ಒಂದೇ. ಆದರೆ ಸಮಾಜದಲ್ಲಿ ಶ್ರೀಮಂತ, ಬಡವ ಎಂಬ ವ್ಯತ್ಯಾಸವಿದೆ. ಈ ಅಸಮತೋಲನ ಹೋಗಬೇಕು. ಶೈಕ್ಷಣಿಕವಾಗಿ ಎಲ್ಲ ಮಕ್ಕಳಿಗೂ ಸಮಾನವಾದ ಅವಕಾಶ, ಸವಲತ್ತು ಸಿಗಬೇಕು, ನಮ್ಮ ಅಸೋಸಿಯೇಷನ್ ವತಿಯಿಂದ ಪ್ರತಿ ವರ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡುತ್ತಾ ಬಂದಿದ್ದೇವೆ’ ಎಂದರು.
ಅಸೋಸಿಯೇಷನ್ ಅಧ್ಯಕ್ಷ ಕ್ಯಾಪ್ಟನ್ ಸುಬ್ರಮಣ್ಯ ಅಧ್ಯಕ್ಷತೆ ವಹಿಸಿದ್ದರು. ಸುಜಯ ಸುಬ್ರಮಣ್ಯ, ಕಿರಣ್, ಪೂಜಾ ಭಟ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.