ಚನ್ನಪಟ್ಟಣ: ಅಸಂಘಟಿತ ಕಾರ್ಮಿಕರು ಮುಖ್ಯವಾಹಿನಿಗೆ ಬಂದು ಸರ್ಕಾರದಿಂದ ದೊರೆಯುವ ಪ್ರತಿಯೊಂದು ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕಾರ್ಮಿಕ ಇಲಾಖೆಯ ಸಹಾಯಕ ನಿರ್ದೇಶಕ ಮುನಿಲಿಂಗೇಗೌಡ ಕರೆ ನೀಡಿದರು.
ಪಟ್ಟಣದ ಲಾಯದ ಬೀದಿಯಲ್ಲಿ ಜಿಲ್ಲಾ ಟೈಲರ್ ಕಾರ್ಮಿಕರ ಸಂಘ, ಕಾರ್ಮಿಕ ಇಲಾಖೆ ಹಾಗೂ ಸಿಐಟಿಯು ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಟೈಲರ್ ಕಾರ್ಮಿಕರಿಗೆ ಉಚಿತ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನಿಗೆ ಅವಶ್ಯಕವಾಗಿ ಅಗತ್ಯವಿರುವ ವಸ್ತ್ರವನ್ನು ತಯಾರು ಮಾಡುವ ವೃತ್ತಿಯನ್ನು ಹೊಂದಿರುವ ಟೈಲರ್ಗಳು ಸಂಘಟಿತರಾಗಿ ಸಂಘಗಳನ್ನು ರಚನೆ ಮಾಡಿಕೊಂಡು ತಮಗೆ ದೊರೆಯಬೇಕಾದ ನ್ಯಾಯ ಕೇಳಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಸರ್ಕಾರದಿಂದ ಸಿಗುವ ಪ್ರತಿಯೊಂದು ಸೌಲಭ್ಯಗಳನ್ನು ಟೈಲರ್ ಸಮುದಾಯಕ್ಕೆ ನೀಡಲು ತಾವು ಬದ್ಧ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಹಾಗೂ ತಾಲ್ಲೂಕಿನ ಮಹಿಳಾ ಹಾಗೂ ಪುರುಷ ಟೈಲರ್ಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.
ಕಾರ್ಮಿಕ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಯತೀಶ್, ಜಿಲ್ಲಾ ಸಂಘದ ಅಧ್ಯಕ್ಷ ರಿಜ್ವಾನ್ ಖಾನ್, ಉಪಾಧ್ಯಕ್ಷ ಯತೀಶ್ ಕುಮಾರ್, ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ ಸುಧಾಕರ್, ಉಪಾಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ, ಕಾರ್ಮಿಕ ಬಂಧು ಸಂತೋಷ್, ಟೈಲರ್ ಮಹೇಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.