ರಾಮನಗರ: ದಿನಬಳಕೆಯ ತರಕಾರಿ ಧಾರಣೆಯು ಅಲ್ಪ ಏರಿಕೆ ಕಂಡಿದ್ದು, ಮಳೆ ಹೆಚ್ಚಾದಷ್ಟೂ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ.
ಟೊಮೆಟೊ ಧಾರಣೆಯು ಕಳೆದ ಎರಡು ವಾರಗಳಿಂದ ಯಥಾಸ್ಥಿತಿಯಲ್ಲಿಯೇ ಇದ್ದು, ಗ್ರಾಹಕರ ಪಾಲಿಗೆ ಹೊರೆಯಾಗಿಯೇ ಉಳಿದಿದೆ. ಸದ್ಯ ಬೆಲೆ ಇಳಿಯುವ ಸಾಧ್ಯತೆಗಳು ಕಾಣುತ್ತಿಲ್ಲ. ಉಳಿದಂತೆ ಕ್ಯಾರೆಟ್, ಬೀನ್ಸ್, ಅರ್ಥಾತ್ ಹುರುಳಿಕಾಯಿ ಬೆಲೆಯು ಇಳಿದು ಮತ್ತೆ ಏರತೊಡಗಿದೆ.
ಕೊಳೆತ ಈರುಳ್ಳಿ: ಗ್ರಾಹಕರಿಗೆ ಈರುಳ್ಳಿಯು ಅಗ್ಗವಾಗಿದ್ದರೂ ಗುಣಮಟ್ಟ ಅಷ್ಟು ಚೆನ್ನಾಗಿಲ್ಲ.ನಿರಂತರ ಮಳೆಯ ಕಾರಣಕ್ಕೆ ಉತ್ಪನ್ನ ಒಳಗೆ ಕೊಳೆಯುತ್ತಿದೆ. ಮೇಲೆ ಥಳಕಿದ್ದರೂ ಒಳಗೆ ಹುಳುಕುಎಂಬಂತೆ ಇದೆ. ಆದರೆದರದಲ್ಲಿ ಹೆಚ್ಚಿನ ವ್ಯತ್ಯಾಸ ಆಗಿಲ್ಲ. ಬೆಳುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಗ್ರಾಹಕರಿಗೆ ಅಗ್ಗವಾಗಿಯೇ ಇವೆ.
ಬೆಂಡೆ, ಬದನೆ, ಹಾಗಲಕಾಯಿ, ನುಗ್ಗೆ, ಸೀಮೆಬದನೆ, ಹೂಕೋಸು ಸಹಿತ ಹಲವು ತರಕಾರಿಗಳ ಧಾರಣೆಯಲ್ಲಿ ಅಲ್ಪ ಏರಿಕೆ ಆಗಿದೆ. ಮಳೆಗಾಲವಿದ್ದರೂ ಸೌತೆಕಾಯಿ ಮಾತ್ರ ಬೆಲೆ ಇಳಿಸಿಕೊಳ್ಳುತ್ತಿಲ್ಲ. ನಿಂಬೆ ತುಸು ಅಗ್ಗವಾಗಿದೆ.
ಸೊಪ್ಪಿನ ದರ ಏರಿಳಿತ: ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಿಂದಾಗಿ ಮಾರುಕಟ್ಟೆಗೆ ಸೊಪ್ಪು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ನಾಟಿ ಕೊತ್ತಂಬರಿ ಸೊಪ್ಪು ಪ್ರತಿ ಕಂತೆಗೆ (ದಪ್ಪ) ₹30–40ರವರೆಗೂ ಬೆಲೆ ಏರಿಸಿಕೊಂಡಿದೆ. ಫಾರಂ ಕೊತ್ತಂಬರಿ ₹20ಕ್ಕೆ ಸಿಗುತ್ತಿದೆ. ಸಬ್ಬಸ್ಸಿಗೆ, ಮೆಂತ್ಯ, ಪಾಲಕ್, ದಂಟು, ಕೀರೆ, ಕಿಲ್ಕೀರೆ ಮೊದಲಾದ ಸೊಪ್ಪುಗಳ ಬೆಲೆಯೂ ಏರಿಕೆ ಆಗತೊಡಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.