ಕುದೂರು: ಸೋಲೂರಿನ ಚಿಲುಮೆ ಮಠದಲ್ಲಿ ಈಚೆಗೆ ವಿನಾಯಕ ಚೌತಿ ಮತ್ತು ಸಂಸ್ಕೃತಿ, ಸಂಸ್ಕಾರ ಸತ್ಸಂಗ ಕಾರ್ಯಕ್ರಮ ನಡೆಯಿತು.
ಮಾಗಡಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ತಿ.ನಾ ಪದ್ಮನಾಭ ಅವರು ಸಂಸ್ಕೃತಿ, ಸಂಸ್ಕಾರ ಮತ್ತು ಗಣೇಶ ಚತುರ್ಥಿ ಬಗ್ಗೆ ಮಠದ ಮಕ್ಕಳಿಗೆ ಉಪನ್ಯಾಸ ನೀಡಿದರು.
ಗಣೇಶನ ಗುಣಗಳನ್ನು ಪಾಲಿಸುವುದರಿಂದ ನಮ್ಮಲ್ಲಿಯೂ ದೈವಿಕ ಗುಣಗಳು ಬರಲಿವೆ. ಮಕ್ಕಳು ನಿತ್ಯ ಶಿವನಾಮ ಸ್ಮರಣೆ ಹಾಗೂ ವಿಭೂತಿ ಧಾರಣೆ ಮಾಡಬೇಕು. ಯೋಗಭ್ಯಾಸ ಹಾಗೂ ಪಠ್ಯ ಪುಸ್ತಕ ಅಧ್ಯಯನ ಜತೆ ಕಥೆ, ಕಾದಂಬರಿ ಮತ್ತು ಧರ್ಮ ಗ್ರಂಥಗಳ ಅಧ್ಯಯನದಿಂದ ವಿದ್ಯಾರ್ಥಿಗಳ ಬದುಕು ಮತ್ತಷ್ಟು ಹಸನುಗೊಳ್ಳಲಿದೆ ಎಂದು ತಿಳಿಸಿದರು.
ಕಣ್ಣೂರಿನ ಮೃತ್ಯುಂಜಯ ಸ್ವಾಮಿ ಮಾತನಾಡಿ, ಮಠದಲ್ಲಿ ಸಾರ್ವಜನಿಕರು ಹುಟ್ಟು ಹಬ್ಬಗಳನ್ನು ಆಚರಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ದಾಸೋಹ, ಉಪನ್ಯಾಸಗಳು ಮತ್ತು ಸ್ಥಳೀಯರ ಪ್ರೋತ್ಸಾಹ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಠದ ವಿದ್ಯಾರ್ಥಿಗಳು ವಚನ ಗಾಯನ ನಡೆಸಿಕೊಟ್ಟರು. ಜೊತೆಗೆ ಪ್ರಾಮಾಣಿಕ ಜೀವನ ನಡೆಸುವ ಬಗ್ಗೆ ಪ್ರಮಾಣ ವಚನ ಬೋಧಿಸಲಾಯಿತು.
ತಾಲ್ಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಚಿಲುಮೆ ಮಠದ ನಿರ್ವಾಹಕ ಚಂದ್ರಶೇಖರ್, ಗುಡ್ಡದ ರಂಗನಾಥ ಸ್ವಾಮಿ ದೇಗುಲದ ಗುರು ಪೀಠಾಧ್ಯಕ್ಷ ಎಂ.ಆರ್ ರಾಮಸ್ವಾಮಿ, ಯುವ ಮುಖಂಡ ಮಂಜುನಾಥ್, ಶಿಕ್ಷಕರಾದ ಶ್ರೀಗಿರಿಪುರದ ಮಂಜುನಾಥ್, ಸೋಲೂರಿನ ಬಾಲಸುಬ್ರಮಣ್ಯ, ವೀರಭದ್ರ ಸ್ವಾಮಿ, ನಿವೃತ್ತ ಶಿಕ್ಷಕ ರಾಜಣ್ಣ, ಉಮಾದೇವಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.