ADVERTISEMENT

ಅಕ್ರಮ ತ್ಯಾಜ್ಯ ವಿಲೇವಾರಿ; ನೀರಿನ ಮೂಲ ಸೇರುತ್ತಿರುವ ಕಾರ್ಖಾನೆ ವಿಷ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 6:32 IST
Last Updated 26 ಡಿಸೆಂಬರ್ 2023, 6:32 IST
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 1ನೇ ಹಂತದ ಖಾಲಿ ಜಾಗದಲ್ಲಿ ಕಾರ್ಖಾನೆ ತ್ಯಾಜ್ಯ ವಿಲೇವಾರಿ ಮಾಡಿರುವುದು
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 1ನೇ ಹಂತದ ಖಾಲಿ ಜಾಗದಲ್ಲಿ ಕಾರ್ಖಾನೆ ತ್ಯಾಜ್ಯ ವಿಲೇವಾರಿ ಮಾಡಿರುವುದು   

ಹಾರೋಹಳ್ಳಿ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 1 ಮತ್ತು 2ನೇ ಹಂತದಲ್ಲಿರುವ ಕೆಲವು ಕಾರ್ಖಾನೆಗಳು ಚರಂಡಿಗೆ ವಿಷ ತ್ಯಾಜ್ಯ ತಂದು ಹರಿಸುತ್ತಿವೆ. ಚರಂಡಿ ಮೂಲಕ ವಿಷ ನೀರಿನ ಮೂಲಗಳಿಗೆ ಸೇರುತ್ತಿದೆ.

ಸಂಬಂಧಪಟ್ಟ ಇಲಾಖೆಗಳು ಪರವಾನಗಿ ನೀಡುವಾಗ ಸರ್ಕಾರದ ನೀತಿ ನಿಯಮ  ಪಾಲಿಸುವಂತೆ ಷರತ್ತು ವಿಧಿಸಲಾಗುತ್ತದೆ. ಆದರೆ, ಕೈಗಾರಿಕಾ ಪ್ರದೇಶದ ಬಹುತೇಕ ಕಾರ್ಖಾನೆಗಳು ಇಟಿಪಿ ಪ್ಲಾಂಟ್ ಮಾಡಿಕೊಳ್ಳದೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಖಾಲಿ ಜಾಗಗಳಲ್ಲಿ ವಿಲೇವಾರಿ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಖಾಲಿ ಜಾಗ, ಕೆರೆ ಕುಂಟೆ, ಬಾವಿಗಳೇ ಕಸದ ಡಂಪಿಂಗ್ ಯಾರ್ಡ್‌ಗಳಾಗಿವೆ. ಕೆಲವು ಕಾರ್ಖಾನೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ತಂದು ಸುರಿಯುವ ಕೆಲಸ ಮಾಡಲಾಗುತ್ತಿದೆ.

ADVERTISEMENT

ವಿಷವಾದ ಕೆರೆ ನೀರು: ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಉಳಗೊಂಡನಹಳ್ಳಿ, ಸುವರ್ಣಮುಖಿ ಹಳ್ಳ, ಹನುಮೇಗೌಡನದೊಡ್ಡಿ ಬೋಚಯ್ಯನ ಕೆರೆ, ದೇವರಕಗ್ಗಲಹಳ್ಳಿ ಕೆರೆ, ಬನ್ನಿಕುಪ್ಪೆ ಕೆರೆಗಳು ಹಾಳಾಗಿವೆ.

ಕಾರ್ಖಾನೆ ತ್ಯಾಜ್ಯದ ನೀರು ಚರಂಡಿಗೆ ಬಿಡುತ್ತಿರುವುದು

ಕಠಿಣ ಕ್ರಮ ಜರುಗಿಸದ ಪರಿಸರ ಇಲಾಖೆ: ನಿಯಮ ಉಲ್ಲಂಘನೆ ಕೇವಲ ನೋಟಿಸ್‌ಗೆ ಸೀಮಿತವಾಗಿದೆ. ಪರಿಸರ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ದಿಟ್ಟತನ ಪ್ರದರ್ಶಿಸಲಿ: ಪರಿಸರ ಉಳಿಸುವ ಕೆಲಸವನ್ನು ಪರಿಸರ ಇಲಾಖೆ ಅಧಿಕಾರಿಗಳು ಮಾಡಬೇಕಿದೆ. ಯಾರ ಮುಲಾಜಿಗೂ ಒಳಗಾಗದೆ ಹೊಣೆಗೇಡಿಗಳ ಮೇಲೆ ಕ್ರಮ ಕೈಗೊಳ್ಳುವ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡುವ ಕಾರ್ಖಾನೆಗಳಿಗೆ ನೋಟಿಸ್ ನೀಡಿ ಕ್ರಮ ಜರುಗಿಸಲಾಗುವುದು ಎನ್ನುತ್ತಾರೆ ರಾಮನಗರ ಜಿಲ್ಲಾ ಪರಿಸರ ಇಲಾಖೆ ಅಧಿಕಾರಿ ಮಂಜುನಾಥ್.

ರಾತ್ರಿ ವೇಳೆ ಖಾಲಿ ಜಾಗಗಳಲ್ಲಿ ಕೆಲವು ಕಾರ್ಖಾನೆಗಳು ತ್ಯಾಜ್ಯ ವಿಲೇವಾರಿ ಮಾಡುತ್ತಿವೆ. ಇವುಗಳ ವಿರುದ್ಧ ಕ್ರಮ ಜರುಗಿಸಿ ಪರವಾನಗಿ ರದ್ದು ಮಾಡಬೇಕು ಎನ್ನುತ್ತಾರೆ ಮೇಡಮಾರನಹಳ್ಳಿ ಗ್ರಾಮಸ್ಥ ಕುಮಾರ್.

ತ್ಯಾಜ್ಯದ ನೀರು ನೇರವಾಗಿ ಚರಂಡಿ ಸೇರುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.