ADVERTISEMENT

‘ಸೊರಗಿದ ಮೂಡಲಪಾಯ ಯಕ್ಷಗಾನ’

ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಟಿ.ಎಸ್. ರವೀಂದ್ರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 13:50 IST
Last Updated 9 ಜೂನ್ 2019, 13:50 IST
ಶನಿವಾರ ಸಂಜೆ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ತಲಕಾಡಿನ ಟಿ.ಎಸ್. ರವೀಂದ್ರ ಮಾತನಾಡಿದರು
ಶನಿವಾರ ಸಂಜೆ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ತಲಕಾಡಿನ ಟಿ.ಎಸ್. ರವೀಂದ್ರ ಮಾತನಾಡಿದರು   

ರಾಮನಗರ: ಸಂಗೀತ, ಕುಣಿತ, ಅಲಂಕಾರ, ಸಾಹಿತ್ಯ, ವೇಷಭೂಷಣಗಳ ಸಮ್ಮಿಳಿತವಾಗಿರುವ ಮೂಡಲಪಾಯ ಯಕ್ಷಗಾನ ಕಲಾ ಪ್ರಕಾರ ಪ್ರೋತ್ಸಾಹವಿಲ್ಲದೆ ಸೊರಗುತ್ತಿದೆ ಎಂದು ಮೂಡಲಪಾಯ ಯಕ್ಷಗಾನ ಕಲಾವಿದ ತಲಕಾಡಿನ ಟಿ.ಎಸ್. ರವೀಂದ್ರ ಹೇಳಿದರು.

ಇಲ್ಲಿನ ‘ಜಾನಪದ ಲೋಕ’ದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಶನಿವಾರ ಸಂಜೆ ನಡೆದ ‘ತಿಂಗಳ ಅತಿಥಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾವಂತರಲ್ಲದವರೆಲ್ಲರೂ ಸೇರಿ ಮೂಡಲಪಾಯ ಯಕ್ಷಗಾನ ಕಲೆಯನ್ನು ಉಳಿಸಿಕೊಂಡು ಬಂದಿದ್ದರು. ಆದರೆ ಈಗಿನ ಕಾಲಘಟ್ಟದಲ್ಲಿ ಯಕ್ಷಗಾನ ಮಾದರಿಯ ಮೂಡಲಪಾಯ ಯಕ್ಷಗಾನಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗದಿದ್ದರಿಂದ ಮರೆತುಹೋಗುವ ಹಂತ ತಲುಪಿದೆ ಎಂದು ತಿಳಿಸಿದರು.

ADVERTISEMENT

ಕರಾವಳಿ ಪ್ರದೇಶದಲ್ಲಿ ಯಕ್ಷಗಾನವನ್ನೇ ಬದುಕಾಗಿಸಿಕೊಂಡು ಯಕ್ಷಗಾನ ಕಲೆಯನ್ನೇ ಆರಾಧಿಸುತ್ತಿರುವುದರಿಂದ ಕರಾವಳಿ ಯಕ್ಷಗಾನ ಇಂದು ವಿಶ್ವವಿಖ್ಯಾತಿಗೊಂಡಿದೆ. ಆದರೆ ಮೂಡಲಪಾಯ ಕಲಾ ಪ್ರಕಾರ ಮಾತ್ರ ಸೊರಗುತ್ತಿದೆ. ಆದ್ದರಿಂದ ಅಮೂಲ್ಯವಾದ ಸಾಂಸ್ಕೃತಿಕ ಸಂಪತ್ತು ಎನಿಸಿರುವ ಮೂಡಲಪಾಯ ಯಕ್ಷಗಾನ ಕಲೆಯನ್ನು ಉಳಿಸಬೇಕಿದೆ ಎಂದು ತಿಳಿಸಿದರು.

ಮೂಡಲಪಾಯ ಯಕ್ಷಗಾನವನ್ನು ಕಲಿಸಿಕೊಡುತ್ತೇನೆ ಬನ್ನಿ ಎಂದು ಕರೆದರೂ ಯಾರೂ ಬರುತ್ತಿಲ್ಲ. ಶಾಲೆಗಳಿಗೆ ಹೋಗಿ ಉಚಿತವಾಗಿ ಕಲಿಸಿಕೊಡುತ್ತೇನೆ ಎಂದರೂ ಪೋಷಕರು ನಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತದೆ, ಯಕ್ಷಗಾನವನ್ನು ಕಲಿಯುವುದರಿಂದ ಏನು ಪ್ರಯೋಜನವೇನು ಎಂದು ಪ್ರಶ್ನಿಸುತ್ತಾರೆ. ನನ್ನ ಉತ್ತರವನ್ನು ಕೇಳಲು ಅವರು ಸಿದ್ಧರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ತಂದೆ ಸುಬ್ಬೇಗೌಡ ಶಿಕ್ಷಕ ವೃತ್ತಿಯ ಜತೆಗೆ ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದರು. 3 ನೇ ತರಗತಿಯಲ್ಲಿದ್ದಾಗಲೆ ಯಕ್ಷಗಾನವನ್ನು ಕಲಿಯಲು ಆರಂಭಿಸಿದೆ. 60 ವರ್ಷಗಳಿಂದ ಇದೇ ಕಲೆಯಲ್ಲಿ ತೊಡಗಿಸಿಕೊಂಡಿದ್ದೇನೆ. ನನಗೀಗ 73 ವರ್ಷ. ಪ್ರದರ್ಶನವಿಲ್ಲದಿದ್ದಾಗ ಕೂಲಿ ಕೆಲಸ ಮಾಡಿ ಜೀವನ ನಡೆಸಿದ್ದೇನೆ. ಈಗಲೂ ನನಗೆ ಇರಲು ಮನೆ ಬಿಟ್ಟರೆ ಬೇರೆ ಏನೂ ಇಲ್ಲ, ಪ್ರದರ್ಶನ ಮಾಡಲು ಅವಕಾಶಗಳು ದೊರೆಯುತ್ತಿಲ್ಲ, ಮಗನ ದುಡಿಮೆಯಲ್ಲಿ ಜೀವನ ನಡೆಸುತ್ತಿದ್ದೇನೆ ಎಂದರು.

ರಾಮಾಯಣ, ಮಹಾಭಾರತ, ಶಿವಕತೆಗಳು ಸಾಕಷ್ಟು ಪ್ರಸಂಗಗಳನ್ನು ಆಡಿಸಬಲ್ಲ ನೈಪುಣ್ಯತೆ ಇದೆ. ಪಾತ್ರಕ್ಕೆ ಒಪ್ಪುವ ಕುಣಿತಗಳನ್ನು ಹೇಳಿಕೊಡುತ್ತೇನೆ. ಆದರೆ ಮೂಡಲಪಾಯ ಯಕ್ಷಗಾನವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯಬಲ್ಲ ತಂಡಗಳನ್ನು ಕಟ್ಟಬೇಕಾಗಿದೆ ಎಂದು ಅವರು ಹೇಳಿದರು.

ಬರಹಗಾರ ತ್ಯಾಗರಾಜ ಮಾತನಾಡಿ ಕಲಾವಿದರ ಸಮಸ್ಯೆಗಳಿಗೆ ಸರ್ಕಾರ ಸೇರಿದಂತೆ ಸಮಾಜವೂ ಸ್ಪಂದಿಸಬೇಕಾಗಿದೆ. ಕಲಾವಿದರಿಗೆ ಸನ್ಮಾನಗಳಿಗಿಂತ ಪ್ರದರ್ಶನದ ಅವಕಾಶಗಳನ್ನು ಹೆಚ್ಚಿನ ಮಟ್ಟದಲ್ಲಿ ನೀಡಬೇಕಾಗಿದೆ. ರಾಜ್ಯದ ನಾನಾ ಭಾಗಗಳಿಂದ ಕಲಾವಿದರನ್ನು ಕರೆಸಿ ಪ್ರದರ್ಶನಕ್ಕೆ ಅವಕಾಶ ನೀಡಿ ಅವರನ್ನು ಗೌರವಿಸುತ್ತಿರುವುದ ಶ್ಲಾಘನೀಯ ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಮೇನೆಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಮಾತನಾಡಿ, ‘ಕಲಾವಿದರನ್ನು ಗೌರವಿಸಿ, ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯವಾಗಿದೆ. ಯಾವುದೇ ಕಲೆ ಇರಬಹುದು ಅದು ನಶಿಸದೇ ಮುಂದಿನ ತಲೆಮಾರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು. ಭಾರತೀಯ ಕಲೆ, ಪರಂಪರೆ ಸದಾ ಶ್ರೀಮಂತವಾಗಿರಬೇಕು’ ಎಂದು ತಿಳಿಸಿದರು.

ಹಿರಿಯ ಕಲಾವಿದ ಹೊಸಹೆಮ್ಮಿಗೆ ಶಿವರುದ್ರಪ್ಪ, ಜಾನಪದ ಲೋಕದ ಆಡಳಿತಾಧಿಕಾರಿ ಡಾ. ಕುರುವ ಬಸವರಾಜ್, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.