ಕನಕಪುರ: ತಾಲ್ಲೂಕಿನ ಕೂನೂರು ಬಳಿ ಜೋಡಿ ಆನೆಗಳು ಕಾಣಿಸಿಕೊಂಡು ಭತ್ತ, ರಾಗಿ, ಬಾಳೆ ಗಿಡಗಳನ್ನು ನಾಶಗೊಳಿಸಿವೆ. ಇದು ರೈತರಲ್ಲಿ ಆತಂಕ ಸೃಷ್ಟಿಸಿದೆ.
ಕಳೆದ ಒಂದು ವಾರದಿಂದ ಆನೆಗಳು ಜಮೀನಿನಲ್ಲಿ ಕಾಣಿಸಿಕೊಂಡಿದ್ದು ಕೂನೂರು, ಸಿದ್ದೇಶ್ವರನದೊಡ್ಡಿ, ಹುಲಿಬೆಲೆ ಬೆಕ್ಕೆಗುಡದ ದೊಡ್ಡಿ, ಕರಿರಾಯರದೊಡ್ಡಿ ಭಾಗದಲ್ಲಿ ಓಡಾಡುತ್ತಿವೆ.
ಸಂಜೆ 6ಗಂಟೆ ಆಗುತ್ತಿದ್ದಂತೆ ಜಮೀನು ಕಡೆ ಓಡಾಡುವುದು ಕಷ್ಟವಾಗಿದೆ. ಯಾವ ಸಂದರ್ಭದಲ್ಲಿ ದಾಳಿ ನಡೆಸುತ್ತವೆ ಎಂಬ ಭಯದಲ್ಲಿ ಗ್ರಾಮಸ್ಥರಿದ್ದಾರೆ.
ಶ್ರೀನಿವಾಸನಹಳ್ಳಿ, ತೇರಿನದೊಡ್ಡಿ, ನಿಡಗಲ್ಲು, ಒರಳಗಲ್ಲು ಗ್ರಾಮದಲ್ಲಿ ಆನೆ ದಾಳಿಯಿಂದ ಒಬ್ಬೊಬ್ಬರು ರೈತರು ಸಾವನ್ನಪ್ಪಿದ್ದಾರೆ. ಕೂನೂರು ಬಳಿ ರೈತರು ಒಬ್ಬರ ಮೇಲೆ ಆನೆ ದಾಳಿ ಮಾಡಿ ಕಾಲು ಕೈ ಕಳೆದುಕೊಂಡಿದ್ದಾರೆ.
ಭಾನುವಾರ ರಾತ್ರಿ ಲಕ್ಷ್ಮಮ್ಮ ನಾಗರಾಜು ಅವರ ಭತ್ತದ ಗದ್ದೆ ಹಾಗ ಹುಲಿಬಲೆ ಸಮೀಪದ ಹನುಮಗೌಡ ಅವರ ಜಮೀನಿನಲ್ಲಿ ಭತ್ತದ ಫಲಸು ಹಾಳು ಮಾಡಿವೆ.
ಕಾಡಾನೆಗಳು ನಿರಂತರವಾಗಿ ದಾಳಿ ನಡೆಸಿ ಬೆಳೆಗಳನ್ನು ನಾಶಗೊಳಿಸುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸಂತ್ರಸ್ತೆ ಲಕ್ಷ್ಮಮ್ಮ ನಾಗರಾಜು ಆರೋಪಿಸಿದರು.
ಸರ್ಕಾರದಿಂದ ಸಿಗುವ ಸಣ್ಣ ಪರಿಹಾರದಿಂದ ರೈತರಿಗೆ ಯಾವುದೇ ಲಾಭ ಸಿಗುತ್ತಿಲ್ಲ. ಅರಣ್ಯ ಇಲಾಖೆ ಕಾಡಾನೆಗಳನ್ನು ಶಾಶ್ವತವಾಗಿ ಅರಣ್ಯಕ್ಕೆ ಓಡಿಸಬೇಕು ಎನ್ನುತ್ತಾರೆ ಹುಲಿಬೆಲೆ ನರಸಿಂಹೇಗೌಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.