ರಾಮನಗರ: ಮಾಗಡಿ ತಾಲ್ಲೂಕಿನ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೆಟ್ಟಹಳ್ಳಿಯ ಹೊಲದಲ್ಲಿ ಶನಿವಾರ ಯುವತಿಯೊಬ್ಬಳ ಶವ ಪತ್ತೆಯಾಗಿದ್ದು, ಪರಿಚಯಸ್ಥರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹೇಮಲತಾ (18) ಕೊಲೆಗೀಡಾದ ಯುವತಿ. ಎರಡು ದಿನಗಳ ಹಿಂದೆ ಮನೆಯಿಂದ ಹೊರ ಹೋದವಳು ನಾಪತ್ತೆಯಾಗಿದ್ದಳು. ಶನಿವಾರ ಮುಂಜಾನೆ ಮನೆಗೆ ಸಮೀಪದ ತೋಟವೊಂದರಲ್ಲಿ ಆಕೆ ಶವವಾಗಿ ಪತ್ತೆಯಾಗಿದ್ದಾಳೆ.
ಯುವತಿಯನ್ನು ಹತ್ಯೆ ಮಾಡಿ ಗ್ರಾಮದ ಜಮೀನಿನೊಂದರಲ್ಲಿ ಗುಂಡಿ ತೆಗೆದು ಹೂಳಲಾಗಿತ್ತು. ಸಮೀಪದಲ್ಲಿ ಕಂಡು ಬಂದ ರಕ್ತದ ಕಲೆಗಳ ಜಾಡು ಹಿಡಿದು ಪರಿಶೀಲಿಸಿದಾಗ ಗುಂಡಿಯ ಒಳಗೆ ಶವ ದೊರಕಿತು. ಯುವತಿಯ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ದೇಹದ ಅಲ್ಲಲ್ಲಿಯೂ ಗಾಯದ ಗುರುತುಗಳಿವೆ. ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಪ್ರೇಮ ಸಂಬಂಧ?: ಹತ್ಯೆಗೀಡಾದ ಯುವತಿ ಕಳೆದ ಮೂರು ವರ್ಷದಿಂದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ಸಂಬಂಧ ಕುದೂರು ಠಾಣೆಯಲ್ಲೂ ರಾಜೀ ಸಂಧಾನ ನಡೆದಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಎಲ್ಲ ಆಯಾಮಗಳಿಂದಲೂ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಹೇಮಲತಾ ಯುವಕನೊಬ್ಬನನ್ನು ಇಷ್ಟ ಪಟ್ಟಿದ್ದಾಗಿ ಆಕೆಯ ಪೋಷಕರು ಹೇಳಿಕೆ ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಕೊಲೆಯ ಕಾರಣ ತಿಳಿಯಲಿದೆ’ ಎಂದು ಸಹಾಯಕ ಪೊಲೀಸ್ ವರಿಷ್ಟಾಧಿಕಾರಿ ರಾಮರಾಜನ್ ಪತ್ರಕರ್ತರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.