ಚನ್ನಪಟ್ಟಣ: ಪಟ್ಟಣದ ಕೋಟೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಯ 348ನೇ ಆರಾಧನ ಮಹೋತ್ಸವದ ಪೂರ್ವಾರಾಧನಾ ಕಾರ್ಯಕ್ರಮ ಎರಡು ದಿನ ವಿಜೃಂಭಣೆಯಿಂದ ನೆರವೇರಿತು.
ಗುರುವಾರ ಪೂಜಾ ಕಾರ್ಯ ಆರಂಭವಾಗಿದ್ದು, ಸಂಜೆ 6.30ಕ್ಕೆ ಧ್ವಜಾರೋಹಣ, ಅಂಕುರಾರ್ಪಣೆ, ಗೋ ಪೂಜೆ, ಅಶ್ವ ಪೂಜೆ, ಗಜ ಪೂಜೆ, ಧಾನ್ಯ ಪೂಜೆ, ಮಹಾಮಂಗಳಾರತಿ ಮಾಡಲಾಯಿತು.
ಶುಕ್ರವಾರ ಮುಂಜಾನೆ 5.30ಕ್ಕೆ ಸುಪ್ರಭಾತ ಸೇವೆ, ಮಂಗಳವಾದ್ಯ, ರಾಯರಿಗೆ ನಿರ್ಮಲ ಸೇವೆ, ಬೆಳಿಗ್ಗೆ 7 ಗಂಟೆಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ತುಳಸಿ ಅರ್ಚನೆ, 9 ರಿಂದ 11 ಗಂಟೆವರೆಗೂ ಗುರುಗಳ ಪಾದ ಪೂಜೆ, ಕನಕಾಭಿಷೇಕ ಸೇವೆ ನಡೆಸಲಾಯಿತು.
11 ಗಂಟೆಯಿಂದ 12 ಗಂಟೆ ವರೆಗೆ ಶ್ರೀ ಮಾತಾ ಸಂಕೀರ್ತನಾ ಭಜನಾಮಂಡಲಿ ವತಿಯಿಂದ ಭಜನಾ ಕಾರ್ಯಕ್ರಮ, ಸಂಜೆ 6 ರಿಂದ 7 ಗಂಟೆ ವರೆಗೆ ರಜತ ತೊಟ್ಟಿಲು ಸೇವೆ, ನಂತರ ಬೆಂಗಳೂರಿನ ಸಾಂಸ್ಕೃತಿಕ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಗುರುರಾಘವೇಂದ್ರ ಬೃಂದಾವನ ಸಮಿತಿ ಅಧ್ಯಕ್ಷ ಎಂ.ಎನ್.ಕೃಷ್ಣಮೂರ್ತಿ, ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಕಾರ್ಯದರ್ಶಿ ನಂಜುಂಡಯ್ಯ, ಸಹಕಾರ್ಯದರ್ಶಿ ವೆಂಕಟೇಶಮೂರ್ತಿ, ಖಜಾಂಚಿ ಸಿ.ಜಿ.ಮಧುಸೂದನ, ನಿರ್ದೇಶಕರಾದ ರಾಘವೇಂದ್ರ ಮಯ್ಯ, ಮಧುಹೆಗ್ಡೆ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.