ಹುಬ್ಬಳ್ಳಿ: ‘ಹಣವನ್ನು ದೇಶದ ರಕ್ತ ಎಂದು ಪರಿಗಣಿಸಿದರೆ, ಬ್ಯಾಂಕ್ಗಳು ಹೃದಯ ಇದ್ದ ಹಾಗೆ. ಹೃದಯ ಹೇಗೆ ಪಂಪ್ ಮಾಡಿದರೆ ರಕ್ತ ಇಡೀ ದೇಹದೊಳಗೆ ಸಂಚರಿಸುತ್ತದೆಯೋ ಅದೇ ರೀತಿ ಬ್ಯಾಂಕ್ಗಳು ಹಣದ ಹರಿವಿಗೆ ಕಾರಣವಾಗುತ್ತವೆ’ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್ ಹೇಳಿದರು.
ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ನಗರದ ರಾಯ್ಕರ್ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಕಾರು– ಗೃಹ ಸಾಲ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕೊಳ್ಳುವಿಕೆ ಹೆಚ್ಚಾದಾಗ ಆರ್ಥಿಕತೆ ವೃದ್ಧಿಯಾಗುತ್ತದೆ ಹಾಗೂ ಜನರಿಗೆ ಉದ್ಯೋಗ ಸಹ ಸಿಗುತ್ತದೆ. ಇಂತಹ ಮೇಳಗಳನ್ನು ಆಯೋಜಿಸಿ ವಸ್ತುಗಳನ್ನು ಪ್ರದರ್ಶನ ಮಾಡಿದಾಗ, ಅದು ಕೊಳ್ಳುವ ಜನರ ಆಸೆಯನ್ನು ಹೆಚ್ಚಿಸುತ್ತದೆ’ ಎಂದರು.
ಎಸ್ಬಿಐ ಉಪ ಪ್ರಧಾನ ವ್ಯವಸ್ಥಾಪಕ ಇಂದ್ರನೀಲ್ ಬಾಂಜಾ ಮಾತನಾಡಿ, ಕಳೆದ ವರ್ಷ ಆಯೋಜಿಸಿದ್ದ ಸಾಲ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿಯೂ ಆಕರ್ಷಕ ಬಡ್ಡಿದರ, ಪ್ರಕ್ರಿಯೆ ಶುಲ್ಕ ರಿಯಾಯಿತಿ ಸೇರಿದಂತೆ ಹಲವು ಆಕರ್ಷಕ ಕೊಡುಗೆ ನೀಡಲಾಗುತ್ತಿದೆ. ‘ಯೊನೊ’ ಆ್ಯಪ್ ಮೂಲಕ ಸಹ ಸಾಲ ಪಡೆಯಬಹುದು. ಇದರಲ್ಲಿಯೂ ಹಲವು ರಿಯಾಯಿತಿ ಇವೆ ಎಂದರು.
ಸ್ಮಾರ್ಟ್ ಸಿಟಿ ಯೋಜನೆ ಜಾರಿಯಾಗುತ್ತಿರುವುದರಿಂದ ಹುಬ್ಬಳ್ಳಿ– ಧಾರವಾಡ ನಗರ ತುಂಬ ಸ್ಮಾರ್ಟ್ ಆಗುತ್ತಿದೆ. ಅತ್ಯಂತ ವೇಗವಾಗಿ ನಗರ ಬೆಳೆಯುತ್ತಿದೆ ಎಂದು ಅವರು ಹೇಳಿದರು. ಎಸ್ಬಿಐ ಪ್ರಾದೇಶಿಕ ವ್ಯವಸ್ಥಾಪಕ ವಿಜಯಕುಮಾರ್ ಚೌರಾಸಿಯಾ ಇದ್ದರು. ಶನಿವಾರ ಮತ್ತು ಭಾನುವಾರದ ವರೆಗೂ ಸಾಲ ಮೇಳ ನಡೆಯಲಿದೆ. ಹಲವಾರು ಕಾರು ಮತ್ತು ರಿಯಲ್ ಎಸ್ಟೇಟ್ ಕಂಪನಿಗಳು ಇದರಲ್ಲಿ ಭಾಗವಹಿಸಿದ್ದು, ವಿಶೇಷ ಕೊಡುಗೆ ನೀಡುತ್ತಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.