ADVERTISEMENT

ಅದ್ಭುತ ತಾಣ ಭೀಮಲಿಂಗೇಶ್ವರ ಮಂದಿರ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 5:50 IST
Last Updated 7 ಮಾರ್ಚ್ 2011, 5:50 IST

ಕಾರ್ಗಲ್: ‘ಪ್ರಕೃತಿ ಮಾತೆಯ ಮಡಿಲಲ್ಲಿ ನೆಲೆಗೊಂಡಿರುವ ಶ್ರೀಭೀಮಲಿಂಗೇಶ್ವರನ ದರ್ಶನ ಮಾಡಿದ ಅಮೃತ ಘಳಿಗೆಯಲ್ಲಿ ಮನುಜ ಮಾತು ಮರೆಯುತ್ತಾನೆ. ಅಂಥ ಅದ್ಭುತ ತಾಣ ಶ್ರೀಕ್ಷೇತ್ರ ಭೀಮಲಿಂಗೇಶ್ವರ ಮಂದಿರ’ ಎಂದು ಕೆಳದಿಯ ಬಂದಗದ್ದೆ ರಾಜಗುರು ಮಠದ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.ಶ್ರೀಕ್ಷೇತ್ರ ಭೀಮಲಿಂಗೇಶ್ವರದಲ್ಲಿ ಭಾನುವಾರನಡೆದ ‘ಸಾಂಗ ಅತಿರುದ್ರ ಮಹಾಯಾಗ’ ಕಾರ್ಯಕ್ರಮದ ಸರ್ವಶಿವಂ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಒಂದೊಮ್ಮೆ ಪರಶಿವ ಮುನಿದರೂ ಗುರು ಕಾಯುತ್ತಾನೆ. ಆದರೆ, ಗುರು ಮುನಿದರೆ ಜಗದ ಯಾವ ಶಕ್ತಿಯೂ ಆತನ್ನು ರಕ್ಷಿಸಲಾರದು.

ಗುರುವಿನ ಮಹತ್ವ ಅಂಥದ್ದು. ಅನಾದಿ ಕಾಲದಿಂದ ಇದ್ದ ಗುರು ಪರಂಪರೆಯ ಮಹತ್ವದ ಅರಿವಿನ ಕೊರತೆಯನ್ನು ನೀಗಿಸುವ ಕೆಲಸ ಆಗಬೇಕಿದೆ ಎಂದರು.
ಸಂಘಟನೆಯಲ್ಲಿ ಶಕ್ತಿಯಿದೆ. ಅದರ ಪ್ರತೀಕವೇ ಈಗ ನಾವೆಲ್ಲರೂ ಪಾಲ್ಗೊಂಡಿರುವ ಈ ಮಹಾಕಾರ್ಯವಾಗಿದೆ. ಧಾರ್ಮಿಕ ಸಂಘಟನೆಗಳು ನಮ್ಮ ಸಂಸ್ಕೃತಿಯ ಅರಿವು ಮತ್ತು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಮುಂದಿನ ಪೀಳಿಗೆಗೆ ನೈಜತೆ, ಪ್ರಾಮಾಣಿಕತೆ, ಧಾರ್ಮಿಕತೆ, ಸಂಸ್ಕೃತಿಯ ಮೌಲ್ಯಯುತ ಕೊಡುಗೆಗಳನ್ನು ಉಡುಗೊರೆಯಾಗಿ ನೀಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು

 ತಾಳಗುಪ್ಪ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಾರಾಯಣ್ ಮಾತನಾಡಿ, ಅತ್ಯುತ್ತಮ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆಯನ್ನು ಹೊಂದಿದ್ದರೂ ಈ ಪ್ರದೇಶ ನಿರ್ಲಕ್ಷಿತಗೊಂಡಿರುವುದು ವಿಷಾದನೀಯ. ನಿಸರ್ಗ ನಿರ್ಮಿತ ಶ್ರೀಕ್ಷೇತ್ರ ಜನರ ಶ್ರದ್ಧಾ ಭಕ್ತಿಯ ಕೇಂದ್ರವೂ ಆಗಿದೆ. ಈ ಭಾಗದ ಪ್ರತಿನಿಧಿಯಾಗಿ ಈ ಕ್ಷೇತ್ರದ ಅಭಿವೃದ್ಧಿಗೆಶಕ್ತಿಮೀರಿ ಪ್ರಯತ್ನಿಸುವದಾಗಿ ಅವರು ಭರವಸೆ ನೀಡಿದರು.

ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಣ್ಣುಮನೆ ಚಿದಂಬರ ರಾವ್ ಮಾತನಾಡಿ, ಅಸಾಧ್ಯ ಎಂದು ಭಾವಿಸಿದ್ದ ಮಹಾರುದ್ರ ಯಾಗವನ್ನು ಈಗ ಸಾಧ್ಯವಾಗಿಸಲಾಗಿದೆ. ಈ ವಿಚಾರವಾಗಿ ಭಕ್ತರು, ಕಾರ್ಯಕರ್ತರ ಹಾಗೂ ಸ್ಥಳೀಯ ಗ್ರಾಮಸ್ಥರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಾವಿರಾರು ಜನ ಸಹಕರಿಸಿದ್ದಾರೆ. ಈ ವೇದಿಕೆಯಲ್ಲಿ ಎಲ್ಲರಿಗೂ ಕೃತಜ್ಞತೆಎಂದರು.

ಸಾಗರದ ಎಪಿಎಂಸಿ ಉಪಾಧ್ಯಕ್ಷ ತ್ಯಾಗಮೂರ್ತಿ, ತಲವಾಟ ಕ್ಷೇತ್ರದ ತಾಲೂಕು ಪಂಚಾಯ್ತಿ ಸದಸ್ಯೆ ಗಿರಿಜಾ ಮಹಾದೇವ್ ಹಾಗೂ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಲಕ್ಷ್ಮಿ ನಾರಾಯಣ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.