ADVERTISEMENT

ಅನ್ನದಾತರ ಕೂಗಿಗೆ ದಿಕ್ಕೆಟ್ಟ ಮೆಸ್ಕಾಂ ಸಿಬ್ಬಂದಿ

ಶಿರಾಳಕೊಪ್ಪ: ತಾಳಗುಂದ, ಉಡುಗಣಿ ಹೋಬಳಿ ಭಾಗದ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2013, 8:30 IST
Last Updated 7 ಫೆಬ್ರುವರಿ 2013, 8:30 IST
ಅನ್ನದಾತರ ಕೂಗಿಗೆ ದಿಕ್ಕೆಟ್ಟ ಮೆಸ್ಕಾಂ ಸಿಬ್ಬಂದಿ
ಅನ್ನದಾತರ ಕೂಗಿಗೆ ದಿಕ್ಕೆಟ್ಟ ಮೆಸ್ಕಾಂ ಸಿಬ್ಬಂದಿ   

ಶಿರಾಳಕೊಪ್ಪ: ಭುಗಿಲೆದ್ದ ಆಕ್ರೋಶ, ಸಿಡಿದೆದ್ದ ರೈತರು, ತತ್ತರಿಸಿದ ಅಧಿಕಾರಿ ವರ್ಗ.
-ಇದು ಪಟ್ಟಣದಲ್ಲಿ ಬುಧವಾರ ವಿದ್ಯುತ್ ಸಮಸ್ಯೆ ವಿರುದ್ಧ ರೈತರು ಪಕ್ಷಾತೀತವಾಗಿ ನಡೆಸಿದ ಪ್ರತಿಭಟನೆ ವೇಳೆ ಕಂಡುಬಂದ ಚಿತ್ರಣ.

ಹಲವು ದಿನಗಳಿಂದ ವಿದ್ಯುತ್ ಅಭಾವ ಅನುಭವಿಸುತ್ತಿರುವ ತಾಳಗುಂದ ಹಾಗೂ ಉಡುಗಣಿ ಹೋಬಳಿ ಭಾಗದ ರೈತರು ಸ್ವಯಂಪ್ರೇರಿತರಾಗಿ   ಪ್ರತಿಭಟನೆ ನಡೆಸಿದರು.

ಅಕ್ಷರಶಃ ಕೆರಳಿದ್ದ ಸಾರ್ವಜನಿಕರು ಬಸ್‌ನಿಲ್ದಾಣದ ವೃತ್ತದಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿ ರಸ್ತೆ ಸಂಚಾರ ನಿರ್ಬಂಧಿಸಿದರು.
ಎತ್ತಿನ ಗಾಡಿಗಳೊಂದಿಗೆ ಖಾಲಿ ಕೊಡ ಹಿಡಿದ ರೈತರು ಜಮಾಯಿಸಿದರು. ಬಸ್‌ನಿಲ್ದಾಣದಿಂದ ಮೆಸ್ಕಾಂ ಕಚೇರಿ ವರೆಗೆ ತೆರಳಿದ ಸಾವಿರಾರು ಸಂಖ್ಯೆ ಪ್ರತಿಭಟನಾ ನಿರತರು, ಕಚೇರಿ ಆವರಣದಲ್ಲಿ ಕಾಲಿಡುತ್ತಿದ್ದಂತೆ ಅಧಿಕಾರಿಗಳಿಗೆ ದಿಕ್ಕು ತೋಚದಂತಾಯಿತು.

ಸಪ್ರತಿಭಟನಾ ಕಾರರು ಕಚೇರಿ ಒಳಗೆ ನುಗ್ಗಲು ಯತ್ನಿಸಿದರು. ಆದರೆ, ಪೊಲೀಸರ ಸಮಯ ಪ್ರಜ್ಞೆಯಿಂದ ಯಶಸ್ಸು ಸಿಗಲಿಲ್ಲ. ಕಾರಣ, ಕಿಟಕಿ ಬಾಗಿಲು ಧ್ವಂಸಗೊಳಿಸಿದರು. ಎಲ್ಲಾ ಪಕ್ಷಗಳ ರಾಜಕಾರಣಿಗಳ ವಿರುದ್ಧ ಧಿಕ್ಕಾರ ಕೂಗಿದರು.

ರೈತ ಮುಖಂಡ  ಮುಗಳಿಕೊಪ್ಪ ರಾಜು ಮಾತನಾಡಿ, ರೈತರ ಬೆಳೆ ಒಣಗುತ್ತಿದ್ದು, ಬಡವರ ಬದುಕಲ್ಲಿ ಅಧಿಕಾರಿಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ. ಮಕ್ಕಳಿಗೆ ಪರೀಕ್ಷೆ ಸಮಯವಾಗಿದ್ದರಿಂದ  ವಿದ್ಯಾಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ತಡರಾತ್ರಿ ಎದ್ದು ಮಹಿಳೆಯರು ಕುಡಿಯುವ ನೀರು ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದ್ದುತ್ತು.

ನಂತರ ಮೆಸ್ಕಾಂ ಅಧಿಕಾರಿಗಳಾದ ಜಗದೀಶ ಹಾಗೂ ಚಿದಾನಂದ ಮೂರ್ತಿ ಹೊರಗೆ ಬಂದು ಪ್ರತಿಕ್ರಿಯೆ ನೀಡಲು ಮುಂದಾದರೂ ಜನರು ಆಸ್ಪದ ನೀಡಲಿಲ್ಲ. ತಹಶೀಲ್ದಾರ್ ಕೆ.ಎಚ್. ಶಿವಕುಮಾರ ಆಗಮಿಸಿ ಪ್ರಮುಖರ ಜತೆಗೆ 2 ಸುತ್ತಿನ ಮಾತುಕತೆ ನಡೆಸಿದರು ಫಲ ನೀಡಲಿಲ್ಲ. 3ನೇ ಸುತ್ತಿನ ಮಾತುಕತೆ ಸಫಲವಾಯಿತು.

ನಂತರ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಫೆ. 10ರವರೆಗೆ ಹಗಲು 2 ಗಂಟೆ ತ್ರೀಫೇಸ್, ಸಂಜೆ 6ರಿಂದ 10ರ ವರೆಗೆ 3 ಗಂಟೆ ಸಿಂಗಲ್‌ಫೇಸ್, ರಾತ್ರಿ 3 ಗಂಟೆ ತ್ರೀಫೆಸ್ ವಿದ್ಯುತ್ ನೀಡಲಾಗುವುದು. ಫೆ. 10 ನಂತರ ಈ ಹಿಂದಿನಂತೆ ಮುಂದುವರಿಯುತ್ತದೆ ಎಂದು ತಿಳಿಸಿದ ನಂತರ  ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.