ಶಿವಮೊಗ್ಗ: ಮುಕ್ತ ವಿಶ್ವವಿದ್ಯಾಲಯದ ಪದವಿ ತರಗತಿಯ ಉತ್ತರಪತ್ರಿಕೆಗಳನ್ನು ಮುಂದಿನ ವರ್ಷದಿಂದ ಆನ್ಲೈನ್ ಮೂಲಕವೇ ಪಡೆಯುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕುಲಪತಿ ಕೆ.ಎಸ್. ರಂಗಪ್ಪ ತಿಳಿಸಿದರು.
ನಗರದ ಎಟಿಎನ್ಸಿಸಿ ಕಾಲೇಜಿನ ಕೆಎಸ್ಒಯು ಪದವಿ ಪರೀಕ್ಷಾ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿದ ನಂತರ ಅವರು, ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವ್ಯವಸ್ಥೆ ಜಾರಿಯಿಂದ ವಿದ್ಯಾರ್ಥಿಗಳಿಗೆ ಸುಲಭವಾಗಿ ತಮ್ಮ ಉತ್ತರಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗಲಿದೆ. ಈಗಾಗಲೇ ಬಿಬಿಎಂ ಕೋರ್ಸ್ನ ಎಲ್ಲ ಪ್ರಕ್ರಿಯೆಯನ್ನು ಆನ್ಲೈನ್ಗೊಳಿಸಲಾಗಿದೆ.
ನೋಟ್ಸ್ ನೀಡುವುದು ಸೇರಿದಂತೆ, ಪರೀಕ್ಷೆಯನ್ನು ಕೂಡ ಆನ್ಲೈನ್ ಮೂಲಕವೇ ನಡೆಸಲಾಗುತ್ತಿದೆ ಎಂದು ಹೇಳಿದರು.ಪ್ರಸ್ತುತ ಪದವಿ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷಾ ಅಕ್ರಮ ತಡೆಗೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಜಾಗೃತದಳಗಳನ್ನು ರಚಿಸಲಾಗಿದೆ. ಪರೀಕ್ಷಾ ಅಕ್ರಮಗಳಿಗೆ ಪ್ರೇರೇಪಿಸುವ, ಮೇಲ್ವಿಚಾರಕರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಒಂದೇ ಮಾದರಿಯಲ್ಲಿ ಉತ್ತರ ಬರೆದಿರುವ ಉತ್ತರಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಪರಿಗಣಿಸದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಅಭ್ಯರ್ಥಿಗಳು ರೂ100 ಸಂದಾಯ ಮಾಡಿದರೆ ಉತ್ತರ ಪತ್ರಿಕೆ ಜೆರಾಕ್ಸ್ ಪ್ರತಿ ನೀಡಲಾಗುವುದು. ಇದರಿಂದ ಮೌಲ್ಯಮಾಪನ ಪ್ರಕ್ರಿಯೆ ಮತ್ತಷ್ಟು ಶಿಸ್ತುಬದ್ಧವಾಗಿ ನಡೆಯಲು ಸಹಾಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ದೇಶ-ವಿದೇಶಗಳಲ್ಲಿಯೂ ಕೆಎಸ್ಒಯು ಕೇಂದ್ರಗಳಿವೆ. ರಾಜ್ಯದ 49 ಪರೀಕ್ಷಾ ಕೇಂದ್ರಗಳು ಸೇರಿದಂತೆ ಎಲ್ಲೆಡೆ ಏಕಕಾಲಕ್ಕೆ ಪರೀಕ್ಷೆ ನಡೆಯುತ್ತಿದೆ ಎಂದರು.ಈ ಸಂದರ್ಭದಲ್ಲಿ ಎನ್ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಕೆಎಸ್ಒಯುನ ಸಹಾಯಕ ಸಂಯೋಜನಾಧಿಕಾರಿ ರಾಮಪ್ಪಗೌಡ, ಕೆಎಸ್ಒಯು ಪ್ರಾದೇಶಿಕ ನಿರ್ದೇಶಕ ಡಾ.ಹರೀಶ್, ಎಟಿಎನ್ಸಿಸಿ ಕಾಲೇಜು ಪ್ರಾಂಶುಪಾಲ ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.