ಶಿವಮೊಗ್ಗ: ಆಸ್ಪತ್ರೆಗಳ ಮೇಲೆ ಕೆಲವರು ವಿನಾಕಾರಣ ದಾಳಿ ಮಾಡಿ ಹಾನಿ ಮಾಡುತ್ತಿರುವ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿದ್ದು, ವೈದ್ಯರ ನಿರ್ಭೀತಿಯಿಂದ ಕೆಲಸ ನಿರ್ವಹಿಸಲು ಸಾರ್ವಜನಿಕರು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘದ ನೇತೃತ್ವದಲ್ಲಿ ವೈದ್ಯರು, ವಿವಿಧ ಆಸ್ಪತ್ರೆಗಳು ಸಿಬ್ಬಂದಿ ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆಮನವಿ ಸಲ್ಲಿಸಿದರು.
ಈಚೆಗೆ ನಗರದ ನಂಜಪ್ಪ ಆಸ್ಪತ್ರೆಯಲ್ಲಿ ಅಹಿತರ ಘಟನೆ ನಡೆದಿದ್ದು, ವೈದ್ಯ ಸಮೂಹಕ್ಕೆ ಅತೀವ ನೋವು ತಂದಿದೆ. ಕೆಲವು ಪ್ರಚೋದಿತ
ದುಷ್ಕರ್ಮಿಗಳಿಂದ ನಡೆಯುವ ಈ ರೀತಿಯ ದಾಳಿಯಿಂದ ಇತರೆ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. 2009ರ ಕರ್ನಾಟಕ ಅಧಿನಿಯಮ ಪ್ರಕಟಗೊಂಡು ಜಾರಿಯಾದ ಆದೇಶದಂತೆ ಕರ್ನಾಟಕ ವೈದ್ಯೋಪಚಾರ ಸಿಬ್ಬಂದಿ ಮೇಲೆ ಹಿಂಸಾಚಾರ ಅಥವಾ ವೈದ್ಯೋಪಚಾರ ಸಂಸ್ಥೆಯ ಆಸ್ತಿಗೆ ಹಾನಿ ಮಾಡುವುದನ್ನು ನಿಷೇಧಿಸಲಾಗಿದೆ.
ಇದನ್ನು ಉಲ್ಲಂಘಿಸುವವರಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಜತೆಗೆ ನಷ್ಟವಾದ ವಸ್ತುವಿನ ಬೆಲೆ ಮತ್ತು ₨ 50ಸಾವಿರ ದಂಡ
ವಿಧಿಸಬಹುದಾಗಿದೆ. ಇದನ್ನು ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡುವ ಅಧಿಕಾರ ಇದೆ. ಆದರೆ, ಇಂತಹ ಕಾನೂನು ಇದ್ದರೂ
ಅದರ ಅರಿವು ಇಲ್ಲದೆ ಆಸ್ಪತ್ರೆಗಳಿಗೆ ಹಾನಿ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವವನ್ನು ಸಂಘದ ಅಧ್ಯಕ್ಷೆ ಡಾ.ವಾಣಿ ಕೋರಿ, ಪದಾಧಿಕಾರಿಗಳಾದ ಡಾ.ಎಚ್.ವಿ.ಕೋಟ್ರೇಶ್, ಡಾ.ಕೆ.ಆರ್.ಶ್ರೀಧರ್, ಡಾ.ಪಿ.ನಾರಾಯಣ್, ಡಾ.ಅಮಿತ್ ಹೆಗ್ಡೆ ಮತ್ತಿತರರು ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.