ಸೊರಬ: ಎಪಿಎಂಸಿ ಕೇಂದ್ರದಲ್ಲಿ ಭತ್ತ ಮತ್ತು ಜೋಳ ಖರೀದಿಸಿ ದಾಸ್ತಾನು ಮಾಡಲು ಕೊಠಡಿಯ ಕೊರತೆ ಇರುವುದರಿಂದ ರೈತರು ಕೊಂಡೊಯ್ದ ಆಹಾರ ಧಾನ್ಯ ಖರೀದಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯರು ಆರೋಪಿಸಿದ್ದಾರೆ.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಹಲವು ಸದಸ್ಯರು ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಇಲಾಖೆ ಹಾಗೂ ಎಪಿಎಂಸಿ ಅಧಿರಿಕಾರಿಗಳು ರೈತರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಸದಸ್ಯರು ಆಗ್ರಹಿಸಿದರು.
ಬೆಳೆ ಪರಿಹಾರ ಹಾಗೂ ಬಸವ ವಸತಿ ಮನೆಗಳು ಇನ್ನು ಸರಿಯಾಗಿ ಫಲಾನುಭವಿಗಳಿಗೆ ಸಿಕ್ಕಿಲ್ಲ ಎಂದು ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜಯಶೀಲಪ್ಪ ತರಾಟೆಗೆ ತೆಗೆದು ಕೊಂಡರು.
ತಾಲೂಕಿನಲ್ಲಿ 37 ವೈದ್ಯರಲ್ಲಿ ಕೇವಲ 4 ವೈದ್ಯರಿಂದ ರೋಗಿಗಳ ತಪಾಸಣೆ ಮಾಡುವುದು ಕಷ್ಟ ಎಂದು ಸಭೆಗೆ ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಸತೀಶ್ ತಿಳಿಸಿದರು.
ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸರ್ಕಾರ ಎನ್ಎಚ್ಆರ್ಎಂ ಯೋಜನೆಯಡಿ ರೂ13000 ವೇತನ ನೀಡಿ ಆಯುಷ್ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ದೂರದ ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ಅವರಿಗೆ ದಿನ ಭತ್ಯೆ ನೀಡುತ್ತಿಲ್ಲ. ಸರ್ಕಾರ ದಿನ ಭತ್ಯೆಯನ್ನು ನೀಡಿದರೆ, ಗ್ರಾಮೀಣ ಪ್ರದೇಶಗಳಿಗೆ ಸುಲಭವಾಗಿ ಹೋಗಿ ಸೇವೆ ಮಾಡಲು ಅವರಿಗೆ ಅನುಕೂಲ ವಾಗುತ್ತದೆ. ಈ ವಿಷಯವನ್ನು ಜಿಲ್ಲಾ ಪಂಚಾಯ್ತಿ ಕೆಡಿಪಿ ಸಭೆಯಲ್ಲಿ ಗಮನ ಸೆಳೆಯುವಂತೆ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರಿಗೆ ಮನವಿ ಮಾಡಿದರು.
ತಾಲ್ಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಕಳೆದ 20–30 ವರ್ಷಗಳಿಂದ ನಿವೇಶನ ಹಕ್ಕು ಪತ್ರ ಪಡೆದ ಫಲಾನುಭವಿಗಳಿಗೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಮನೆ ಕಟ್ಟಲು ಅವಕಾಶ ನೀಡುತ್ತಿಲ್ಲ. ಅರಣ್ಯ ಭೂಮಿ ಎಂದು ಬಡವರ ಮೇಲೆ ಶೋಷಣೆ ಮಾಡುತ್ತಿದ್ದಾರೆ. ಮುಂದಿನ ಸಭೆಯೊಳಗೆ ಆ ಗ್ರಾಮದ ಫಲಾನುಭವಿಗಳಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ಒದಗಿಸಿಕೊಡಬೇಕೆಂದು ಸದಸ್ಯ ಬರಗಿ ನಿಂಗಪ್ಪ
ಒತ್ತಾಯಿಸಿದರು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಉಪಾಧ್ಯಕ್ಷೆ, ಇಒ ಇಸ್ಮಾಯಿಲ್, ಸಹಾಯಕ ಕೃಷಿ ಅಧಿಕಾರಿ ಮಂಜುಳಾ, ಸದಸ್ಯರಾದ ಕೆ.ಅಜ್ಜಪ್ಪ, ಪರಮೇಶ್ವರಪ್ಪ, ಲಕ್ಷ್ಮೀ, ಮಧುರಾ ಭಟ್, ಈರಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.