ADVERTISEMENT

ಇಂದು ರೈಲ್ವೆ ಬಜೆಟ್: ಗರಿಗೆದರಿದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 6:00 IST
Last Updated 14 ಮಾರ್ಚ್ 2012, 6:00 IST

ಶಿವಮೊಗ್ಗ: ರೈಲ್ವೆ ಬಜೆಟ್ ಮಾರ್ಚ್ 14ರಂದು ಮಂಡನೆ ಆಗಲಿದ್ದು, ಜಿಲ್ಲೆಯಲ್ಲಿ ಸಹಜ ವಾಗಿಯೇ ನಿರೀಕ್ಷೆಗಳು ಗರಿಗೆದರಿವೆ.

ಬೆಂಗಳೂರು- ಶಿವಮೊಗ್ಗ ಇಂಟರ್‌ಸಿಟಿ ಮತ್ತು ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ತಾಳುಗಪ್ಪದವರೆಗೆ ವಿಸ್ತರಣೆ ಹಾಗೂ ಈಗಾಗಲೇ ಮಂಜೂರಾತಿ ಪಡೆದಿರುವ ಶಿವಮೊಗ್ಗ-ಹರಿಹರ ರೈಲು ಮಾರ್ಗದ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸುವುದು ಪ್ರಮುಖ ಬೇಡಿಕೆಗಳು. ಈ ಮಧ್ಯೆ ತಾಳಗುಪ್ಪ ಲೈನನ್ನು ವಿಸ್ತರಿಸಿ, ಕೊಂಕಣ ರೈಲ್ವೆಗೆ ಸೇರಿಸಬೇಕೆಂಬ ಕೂಗು ಇದೆ.

ಶಿವಮೊಗ್ಗ- ತಾಳಗುಪ್ಪ ಮಾರ್ಗದ ಬ್ರಾಡ್‌ಗೇಜ್ ಪರಿವರ್ತನಾ ಕಾರ್ಯ ಪೂರ್ಣಗೊಂಡು ಈಗಾಗಲೇ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಗೊಂಡಿದೆ. ಪ್ರಸ್ತುತ ಮೈಸೂರು-ಶಿವಮೊಗ್ಗ ಇಂಟರ್‌ಸಿಟಿ ರೈಲು ಮಾತ್ರ ಸಂಚರಿಸುತ್ತದೆ. ಈ ಮೊದಲು ಮೀಟರ್‌ಗೇಜ್ ರೈಲು ಮಾರ್ಗವಿದ್ದಾಗ ಬೆಂಗಳೂರು ರೈಲು ಸಂಚಾರ ತಾಳಗುಪ್ಪದಿಂದಲೇ ಆರಂಭಗೊಳ್ಳುತ್ತಿತ್ತು.
 
ಆದರೆ, ಗೇಜ್ ಪರಿವರ್ತನೆ ಬಳಿಕ ಈ ರೈಲು ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸುತ್ತಿದೆ. ಇದು ಮತ್ತೆ ತಾಳಗುಪ್ಪದವರೆಗೆ ಸಂಚರಿಸಬೇಕು ಎಂಬುದು ಜನರ ಬೇಡಿಕೆ.
ಈಗಾಗಲೇ ಶಿವಮೊಗ್ಗ-ಹರಿಹರ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಸುಮಾರು ್ಙ 700 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಗೊಂಡಿದೆ. ಈ ಕಾಮಗಾರಿ ಆರಂಭಕ್ಕೆ ಅನುದಾನದ ಅಗತ್ಯವಿದೆ. ಅದನ್ನು ಈ ಬಜೆಟ್‌ನಲ್ಲಿ ನಿರೀಕ್ಷಿಸಲಾಗಿದೆ.

ಹಾಗೆಯೇ, ಶಿವಮೊಗ್ಗ- ಶಿಕಾರಿಪುರ, ರಾಣೆಬೆನ್ನೂರು ಹೊಸ ಮಾರ್ಗ ನಿರ್ಮಾಣದ ಸಮೀಕ್ಷಾ ಕಾರ್ಯ ನಡೆಯಬೇಕು ಎಂದು ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.

ಅನುಷ್ಠಾನಕ್ಕೆ ಮನವಿ
ಬೆಂಗಳೂರು -ಶಿವಮೊಗ್ಗ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಸಾಗರ ತಾಲ್ಲೂಕಿನ ತಾಳಗುಪ್ಪದವರೆಗೆ ವಿಸ್ತರಿಸಬೇಕು ಸೇರಿದಂತೆ ಶಿವಮೊಗ್ಗ-ಹರಿಹರ ನೂತನ ರೈಲು ಮಾರ್ಗವನ್ನು ಪೂರ್ಣಗೊಳಿಸಲು ಅನುದಾನ ಬಿಡುಗಡೆ ಮಾಡುವಂತೆ ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಮನವಿ ಮಾಡಿದರು.

ನವದೆಹಲಿಯಲ್ಲಿ ಮಂಗಳವಾರ ಅವರ ನಿವಾಸದಲ್ಲಿ ಭೇಟಿ ಮಾಡಿದ ರಾಘವೇಂದ್ರ, ಜಿಲ್ಲೆಯ ರೈಲ್ವೆ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಈ ಬಾರಿ ಬಜೆಟ್‌ನಲ್ಲಿ ಆದ್ಯತೆ ನೀಡುವಂತೆ ಮನವಿ ಮಾಡಿದರು ಎಂದು ಸಂಸತ್ ಸದಸ್ಯರ ಕಚೇರಿ ಪ್ರಕಟಣೆ ತಿಳಿಸಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.