ADVERTISEMENT

ಈಶ್ವರಪ್ಪಗೆ ಕೋ ಕೊಡಲು ಯಾರಿಂದಲೂ ಸಾಧ್ಯವಿಲ್ಲ!

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 8:55 IST
Last Updated 13 ಅಕ್ಟೋಬರ್ 2012, 8:55 IST

ಶಿವಮೊಗ್ಗ:  ಈಶ್ವರಪ್ಪ ಅವರಿಗೆ ರಾಜಕೀಯದಲ್ಲಿ `ಕೋ~ ಕೊಡಲು ಯಾರಿಗೂ ಸಾಧ್ಯವಿಲ್ಲ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಛೇಡಿಸಿದರು.

ಶುಕ್ರವಾರ   ಕಾಲೇಜು ಶಿಕ್ಷಣ ಇಲಾಖೆ ಹಾಗೂ ಕುವೆಂಪು ವಿವಿ ಹಮ್ಮಿಕೊಂಡಿದ್ದ ಕುವೆಂಪು ವಿವಿ ಅಂತರ ಕಾಲೇಜು ಪುರುಷರ ಕೊಕ್ಕೊ ಪಂದ್ಯಾವಳಿ ಹಾಗೂ ವಿಶ್ವವಿದ್ಯಾಲಯ ಪುರುಷ ಮತ್ತು ಮಹಿಳಾ ತಂಡದ ಆಯ್ಕೆ ಪಂದ್ಯಾವಳಿಯಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಾವು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕೊಕ್ಕೊ ತಂಡದ ಕ್ಯಾಪ್ಟನ್ ಆಗಿದ್ದೆ ಎಂಬ ಮಾತನ್ನು ಪ್ರಸ್ತಾಪಿಸಿದ ಆಯನೂರು ಮಂಜುನಾಥ್, ಕೆ.ಎಸ್. ಈಶ್ವರಪ್ಪ ಅವರು ಕೊಕ್ಕೊ ಆಟವನ್ನು ಚೆನ್ನಾಗಿ ಕಲಿತ್ತಿದ್ದರಿಂದ, ಇಂದು ಅವರು ರಾಜಕೀಯ ರಂಗದಲ್ಲಿ ಯಾರ ಕೈಗೂ ಸಿಗುತ್ತಿಲ್ಲ. ರಾಜಕೀಯದ ರನ್ನಿಂಗ್, ಚೇಸಿಂಗ್‌ನಲ್ಲಿ ಅವರನ್ನು ಹಿಡಿಯಲು ಯಾರಿಂದಲೂ ಆಗುತ್ತಿಲ್ಲ ಎಂದು ನಕ್ಕರು.

ಪ್ರಾಚಾರ್ಯ ಎಂ.ಕೆ. ನಾರಾಯಣಸ್ವಾಮಿ ಮಾತನಾಡಿ, ಕಾಲೇಜಿನಲ್ಲಿ ಪ್ರಥಮ ಬಾರಿ ಕ್ರೀಡಾಕೂಟ ಆಯೋಜಿಸಲು ಅವಕಾಶ ಸಿಕ್ಕಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ, ಉಪಕುಲಪತಿ ಪ್ರೊ.ಎಸ್.ಎ.ಬಾರಿ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಡಿ.ಎಸ್. ಅರುಣ್, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್ ಪಟೇಲ್, ನಗರಸಭೆ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.