ಸೊರಬ: ಬೆಂಬಲ ಬೆಲೆ ಯೋಜನೆಯಡಿ ಭತ್ತ ಹಾಗೂ ಮೆಕ್ಕೆಜೋಳ ಖರೀದಿ ಮಾಡುವ ವೇಳೆ ಅನುಸರಿಸಲಾಗುತ್ತಿರುವ ಮಾನದಂಡ ಸರಳೀಕರಣಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಪಟ್ಟಣದ ಎಪಿಎಂಸಿ ಕಚೇರಿಗೆ ದಿಢಿೀರ್ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ರೈತ ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಓಟೂರು ಮಾತನಾಡಿ, ರಾಜ್ಯ ಸರ್ಕಾರ ರೈತ ಬೆಳೆದ ಭತ್ತ ಹಾಗೂ ಮೆಕ್ಕೆಜೋಳಕ್ಕೆ ನ್ಯಾಯ ಸಮ್ಮತ ಬೆಲೆ ನಿಗದಿ ಮಾಡಬೇಕು ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಬೆಂಬಲ ಬೆಲೆಯಡಿ ಪಟ್ಟಣದ ಎಪಿಎಂಸಿ ಸಭಾಂಗಣದಲ್ಲಿ ಖರೀದಿ ಕೇಂದ್ರವನ್ನು ನ. 25ರಂದು ತೆರೆದಿದ್ದು, ಈಗಾಗಲೇ ರೈತರು ಖರೀದಿ ಕೇಂದ್ರಕ್ಕೆ ಭತ್ತ ಮತ್ತು ಮೆಕ್ಕೆ ಜೋಳ ತಂದಿದ್ದಾರೆ ಆದರೆ, ಖರೀದಿ ಕೇಂದ್ರದಲ್ಲಿ ಅನುಸರಿಸಲಾಗುತ್ತಿರುವ ಮಾನದಂಡದಿಂದ ರೈತರು ಸಮಸ್ಯೆ ಪಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಲವು ಕೃಷಿ ಭೂಮಿಯಲ್ಲಿ ರೈತರು ಬೆಳೆದ ಮೆಕ್ಕೆಜೋಳದ ಕಾಳುಗಳು ಸಣ್ಣದಾಗಿವೆ. ಅಧಿಕಾರಿಗಳು ಇಂಥ ಜೋಳವನ್ನು ಖರೀದಿ ಮಾಡಲು ಮುಂದಾಗಿಲ್ಲ ಎಂದ ಅವರು, ಮಳೆಗಾಲದಲ್ಲಿ ಉಂಟಾದ ಬದಲಾವಣೆಯಿಂದ ಬೆಳೆಗಳು ಕುಂಠಿತಗೊಂಡಿವೆ. ಇದನ್ನು ಅಧಿಕಾರಿಗಳು ಮನಗಂಡು ರೈತರು ಬೆಳೆದ ಎಲ್ಲಾ ಬೆಲೆಯನ್ನು ಸಮಾನವಾಗಿ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪಿ.ಜಿ.ನಟರಾಜ್ ಮಾತನಾಡಿ, ಅನ್ಯಾಯವಾದಾಗ ರೈತರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುವುದು, ಪ್ರತಿಭಟನೆ ನೆಡೆಸುವುದು ಸಾಮಾನ್ಯ. ರೈತರ ಬೇಡಿಕೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಹಾಲೇಶಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ವೇದಮೂರ್ತಿ, ಸಂಘಟನಾ ಕಾರ್ಯದರ್ಶಿ ಸುರೇಶ್, ಮುಖಂಡರಾದ ಜಯಪ್ಪಗೌಡ, ಹಾಲಪ್ಪಗೌಡ, ವಿಜುಗೌಡ, ಮೆಹಬೂಬ್ ಸಾಬ್ ಹಾಗೂ ಮತ್ತಿತರ ರೈತ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.