ADVERTISEMENT

ಓಂ ಗಣಪತಿ ಶಾಂತಿಯುತ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 9:15 IST
Last Updated 19 ಸೆಪ್ಟೆಂಬರ್ 2011, 9:15 IST

ಶಿವಮೊಗ್ಗ: ನಗರದ ಪ್ರತಿಷ್ಠಿತ ಓಂ ಗಣಪತಿ ವಿಸರ್ಜನೆ ಭಾನುವಾರ ಪೊಲೀಸ್ ಬಿಗಿಬಂದೋಬಸ್ತ್‌ನಲ್ಲಿ ಶಾಂತಿಯುತವಾಗಿ ನೆರವೇರಿತು.  ಅಶೋಕ ನಗರದಿಂದ  ಮಧ್ಯಾಹ್ನ 2ಕ್ಕೆ  ಪೊಲೀಸ್ ಬಿಗಿ ಬಂದೋಬಸ್ತ್‌ನೊಂದಿಗೆ ಹೊರಟ  ಓಂ ಗಣಪತಿ ರಾಜಬೀದಿ ಉತ್ಸವದ ವಿಸರ್ಜನಾಪೂರ್ವ ಮೆರವಣಿಗೆ ಎಸ್‌ಪಿಎಂ ರಸ್ತೆ, ರಾಮಣ್ಣ ಸೆಟ್ಟಿ ಪಾರ್ಕ್, ಗಾಂಧಿಬಜಾರ್ ಶಿವಪ್ಪ ವೃತ್ತದ ಮೂಲಕ ಬಿಎಚ್ ರಸ್ತೆಯಲ್ಲಿ  ಸಾಗಿತು.

ನಂತರ ತುಂಗಾ ನದಿಯಲ್ಲಿ ರಾತ್ರಿ  ಗಣಪತಿಯನ್ನು ವಿಸರ್ಜಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆಸಿದ ಓಂ ಗಣಪತಿ ಮಹಾಮಂಡಳಿ ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರೂ ಸಿಳ್ಳೆ, ಕೇಕೆ ಹಾಕಿದರು. ಕುಣಿತಗಳು, ವೈಭವದ ಮೆರವಣಿಗೆ ವೀಕ್ಷಣೆಗೆ ನೆರೆದ ಜನಸ್ತೋಮವನ್ನು ಮಂತ್ರಮುಗ್ದರನ್ನಾಗಿ ಮಾಡಿದವು.

ಪ್ರವೇಶ ನಿರ್ಬಂಧ: ಭಾರೀ ಮೆರವಣಿಗೆ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳ ಸಂಚಾರ ಮಾರ್ಗ ಬದಲಿಸಿದ್ದು, ವಾಹನಗಳಿಗೆ ವೀರಭದ್ರೇಶ್ವರ ವೃತ್ತದಲ್ಲಿ ಚಲಿಸುವಂತೆ ವ್ಯವಸ್ಥೆ ಮಾಡಿ, ಯಾವುದೇ ಗೊಂದಲ ಉಂಟಾಗದಂತೆ ಕಟ್ಟೆಚ್ಚರ ವಹಿಸಲಾಗಿತ್ತು.

ವಿಡಿಯೊ ಕ್ಯಾಮೆರಾ ಅಳವಡಿಕೆ: ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದ ಮೆರವಣಿಗೆ ಉದ್ದಕ್ಕೂ 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅನಗತ್ಯ ಗೊಂದಲ ಸೃಷ್ಟಿಸುವ ಕಿಡಿಗೇಡಿಗಳನ್ನು ಗುರುತಿಸಲು ಅಲ್ಲಲ್ಲಿ ವಿಡಿಯೊ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಅಲ್ಲದೇ, ಮಫ್ತಿಯಲ್ಲಿ ಪೊಲೀಸರು ಮೆರವಣಿಗೆಯಲ್ಲಿ ಪಾಲ್ಗೊಂಡು ಭಕ್ತರನ್ನು ಮುಂದೆ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ್ ಗುಪ್ತಾ ಮೆರವಣಿಗೆ ಉದ್ದಕ್ಕೂ ಹಾಜರಿದ್ದು, ಭದ್ರತಾ ಕ್ರಮಗಳ ಉಸ್ತುವಾರಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.