ADVERTISEMENT

`ಕಲಾತ್ಮಕ ಪಾತ್ರದಲ್ಲಿ ನಟಿಸಲು ಸಿದ್ಧ'

ಜೂನ್ 21ಕ್ಕೆ `ಆಟೋರಾಜ' ಪ್ರದರ್ಶನ ಆರಂಭ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 10:16 IST
Last Updated 14 ಜೂನ್ 2013, 10:16 IST

ಶಿವಮೊಗ್ಗ: `ಕಥೆ ಶಕ್ತಿಯುತವಾಗಿದ್ದರೆ ನನ್ನ ಇಮೇಜ್ ಬದಲಿಸಿಕೊಳ್ಳಲು ಸಿದ್ಧ' ಎಂದು ನಟ ಗಣೇಶ್ ಹೇಳಿದರು.`ನನಗೆ ಎಲ್ಲಾ ರೀತಿಯ ಪಾತ್ರ ಮಾಡಲು ಇಷ್ಟ. ಕಲಾತ್ಮಕ ಚಿತ್ರದಲ್ಲಿ ನಟಿಸಲೂ ನಾನು ಸಿದ್ಧ. ಪ್ರಯೋಗ ನಡೆಸಲೂ ಸಿದ್ಧನಿದೇನೆ. ಆದರೆ, ಕಥೆ ಸತ್ವ ಹೊಂದಿರಬೇಕು' ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸ್ತುತ `ಆಟೋರಾಜ' ಚಿತ್ರ ಜೂನ್ 21ಕ್ಕೆ ಬಿಡುಗಡೆಯಾಗಲಿದೆ. 1983ರಲ್ಲಿ ಶಂಕರನಾಗ್ ನಿರ್ಮಿಸಿದ `ಆಟೋರಾಜ' ಹೆಸರನ್ನೇ ಈ ಚಿತ್ರಕ್ಕೂ ಇಡಲಾಗಿದೆ. ಆದರೆ, ಕಥೆ ಬೇರೆ. ಶಂಕರನಾಗ್ ಅಭಿಮಾನಿಗಳಿಗೆ ಇಷ್ಟವಾಗುವ ರೀತಿಯಲ್ಲಿ ಕಥೆ ಇದೆ ಎಂದರು.

ಈ ಕಥೆಯ ನಾಯಕ ಆಟೋ ಡ್ರೈವರ್ ಶಂಕರನಾಗ್ ಅಭಿಮಾನಿ. ವಿದ್ಯಾವಂತ, ಪ್ರೇಮಿ ಕೂಡ. ಇಲ್ಲಿ ಹಲವು ನೈಜ ಘಟನೆಗಳನ್ನು ಸೇರಿಸಲಾಗಿದೆ. ಜೊತೆಗೆ ಮಳೆ ದೃಶ್ಯ, ಸಾಹಸ ಇದೆ. ಸಾಮಾಜಿಕ ಜವಾಬ್ದಾರಿ ಮೆರೆಯುವ ಪಾತ್ರವೂ ಇದಾಗಿದೆ. ಪ್ರಥಮ ಬಾರಿಗೆ ಇಮೇಜಿಗೆ ಹೊರತಾಗಿ ನಟಿಸಿದ ಚಿತ್ರ ಎಂದು ಗಣೇಶ್ ಹೇಳಿದರು.

`ಆಟೋರಾಜ ನನ್ನ 19ನೇ ಚಿತ್ರ. ಮುಂದಿನ ವರ್ಷ ನನ್ನ ಸ್ವತಃ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸುವ ಯೋಚನೆ ಇದೆ' ಎಂದರು.ಚಿತ್ರನಿರ್ಮಾಪಕ ವಿಶ್ವ ಕಾರ್ಯಪ್ಪ ಮಾತನಾಡಿ, ತಾವು ಶಂಕರನಾಗ್ ಹಾಗೂ ಗಣೇಶರ ಅಭಿಮಾನಿ. ಹಾಗಾಗಿ ಚಿತ್ರವನ್ನು ತುಂಬಾ ಇಷ್ಟಪಟ್ಟು ಮಾಡಿದ್ದೇವೆ. ಎಲ್ಲಿಯೂ ಶಂಕರನಾಗ್ ಅವರ ಹೆಸರಿಗೆ ಚ್ಯುತಿ ತರುವ ಕೆಲಸ ಮಾಡಿಲ್ಲ. ಆತ್ಮತೃಪ್ತಿಗೆ ಮಾಡಿದ ಚಿತ್ರವಾಗಿದ್ದರಿಂದ ಹಣಕಾಸಿನ ಲೆಕ್ಕಾಚಾರ ಇನ್ನೂ ಹಾಕಿಲ್ಲ. ಈ ಚಿತ್ರದ ಚಿತ್ರೀಕರಣ 63 ದಿವಸಗಳ ಕಾಲ ನಿರಂತರವಾಗಿ ನಡೆದಿದೆ. ಕಥೆ- ನಿರ್ದೇಶನ ಉದಯಪ್ರಕಾಶ್ ಅವರದ್ದು ಎಂದರು.

ಸುದ್ದಿಗೋಷ್ಠಿ ನಂತರ ನಗರದ ಪ್ರಮುಖ ರಸ್ತೆಗಳಲ್ಲಿ `ಆಟೋರಾಜ' ಚಿತ್ರದ ಪ್ರಚಾರ ಜಾಥಾ ನಡೆಯಿತು. ತದನಂತರ ಕದಳಿ ಮಹಿಳಾ ಸಂಘ ಹಾಗೂ ಜೆಸಿಐ ವತಿಯಿಂದ ನಗರದ ಚೌಕಿಮಠದಲ್ಲಿ ನಡೆದ ವನ ಮಹೋತ್ಸವದಲ್ಲಿ ಗಣೇಶ್ ಪಾಲ್ಗೊಂಡರು.ಹಾಗೆಯೇ ರೋಟರಿ ಮಿಡ್‌ಟೌನ್ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲೂ ಅವರು ಭಾಗವಹಿಸಿದ್ದರು. ಆರ್‌ಸಿ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಡಿ.ಎಸ್.ಅರುಣ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.