ADVERTISEMENT

ಕಲೆ, ಸಂಸ್ಕೃತಿ ನಾಡಿನ ಪ್ರತೀಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 10:25 IST
Last Updated 10 ಫೆಬ್ರುವರಿ 2012, 10:25 IST

ರಿಪ್ಪನ್‌ಪೇಟೆ: ಇಂದಿನ ದೃಶ್ಯ ಮಾಧ್ಯಮದ ಹಾವಳಿಯ ನಡುವೆ ನಮ್ಮ ಗ್ರಾಮೀಣ  ಜನಪದ ಕಲೆ, ಸಾಹಿತ್ಯ- ಸಂಸ್ಕೃತಿಗಳು ನಶಿಸುತ್ತಿದ್ದು, ಇಂತಹ ಯುವಜನ ಮೇಳಗಳಲ್ಲಿ ಕಂಡು ಬರುವ ಕಲೆ ಸಂಸ್ಕೃತಿಗಳು ನಮ್ಮ ನಾಡಿನ ಪ್ರತೀಕ. ಇದನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದಕ್ಕೆ ಸರ್ಕಾರದ ಉತ್ತೇಜನವೂ ಆವಶ್ಯವಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಕೋಡೂರಿನ ದಿ.ಎಸ್. ಬಂಗಾರಪ್ಪ ಅವರ ವೇದಿಕೆಯಲ್ಲಿ ಈಚೆಗೆ  ನಡೆದ ತಾಲ್ಲೂಕುಮಟ್ಟದ ಯುವ ಜನಮೇಳದ ಸಮಾರೋಪದಲ್ಲಿ ಅವರು ಮಾತನಾಡಿದರು.

ಹಿರಿಯ ರಾಜಕಾರಣಿ ಧೀಮಂತ ನಾಯಕ ಎಸ್. ಬಂಗಾರಪ್ಪ ಅವರ ಅಧಿಕಾರ ಅವಧಿಯಲ್ಲಿ ಹುಟ್ಟು ಹಾಕಿದ ಈ ಯುವ ಜನಮೇಳದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಸಕ್ತಿಯಿಂದ ಬಂದ ಕಲಾವಿದರು ಸಹೋದರಂತೆ ಒಮ್ಮತದಿಂದ ತಮ್ಮಲ್ಲಿರುವ ಪ್ರತಿಭೆಯನ್ನು ತೋರ್ಪಡಿಸಿ ಯುವಜನ ಮೇಳಕ್ಕೆ ಮೆರುಗು ತಂದಿರುವುದು ಪ್ರಶಂಸನೀಯ ಎಂದರು.

ಸರ್ಕಾರದ ನಿರಾಸಕ್ತಿಯಿಂದ ಸಾಂಪ್ರದಾಯಿಕ ಕಲೆಗಳ ಕಾರ್ಯಕ್ರಮಗಳು ಕಾಟಚಾರವಾಗಿ ರೂಪುಗೊಳ್ಳುತ್ತಿರುವುದು ವಿಷಾದ ನೀಯ. ಈಗಿನ ಖರ್ಚು ವೆಚ್ಚದಲ್ಲಿ ಸರ್ಕಾರ ನೀಡುವ ್ಙ  ಹತ್ತು ಸಾವಿರ ರೂಪಾಯಿ ಗೌರವಧನ ತಾಲ್ಲೂಕು ಮಟ್ಟದ ಕಾರ್ಯಕ್ಕೆ ಸಾಕಾಗುತ್ತಿಲ್ಲ. ಯಾವುದೇ, ಸರ್ಕಾರ ಇರಲಿ ಈ ಜನಪದ ಕಲೆ ಸಂಸ್ಕೃತಿಗಳ ಉಳುವಿಗೆ ಕನಿಷ್ಠ ್ಙ  50 ಸಾವಿರ ಗೌರವಧನ ನಿಗದಿ ಮಾಡುವಂತೆ ಸದನದಲ್ಲಿ ಚರ್ಚಿಸುವುದಾಗಿ ಅವರು ತಿಳಿಸಿದರು.

ಎಂಪಿಎಂ ಅಧ್ಯಕ್ಷ  ಆರಗ ಜ್ಙಾನೇಂದ್ರ ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭಾವಂತರನ್ನು ಗುರುತಿಸುವ ಕಾರ್ಯ ಈ ವೇದಿಕೆಯಿಂದ ಆಗುತ್ತಿದ್ದು, ಜೀವಂತಿಕೆ ತುಂಬುವ ಮಾನವೀಯ ಮೌಲ್ಯದ ಬೆಲೆ ಅರಿಯಲು ಜನಪದ ಕಲೆ-ಸಂಸ್ಕೃತಿಗಳಿಗೆ  ಪ್ರೋತ್ಸಾಹ ಅಗತ್ಯ ಎಂದರು.

ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ, ತಾ.ಪಂ. ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಜಿ.ಪಂ. ಸದಸ್ಯರಾದ ಕಲಗೋಡು ರತ್ನಾಕರ, ಜ್ಯೋತಿ ಚಂದ್ರಮೌಳಿ, ತಾ.ಪಂ. ಸದಸ್ಯರಾದ ಕೆ.ಎಸ್. ಕುಬೇರಪ್ಪ, ನಾಗರತ್ನಾ ದೇವರಾಜ, ಗೀತಾ ನಿಂಗಪ್ಪ, ಹಾಗೂ ಗ್ರಾ.ಪಂ. ಅಧ್ಯಕ್ಷ ಪುಟ್ಟಪ್ಪ, ಉಪಾಧ್ಯಕ್ಷೆ ಲಲಿತಾ ಹಾಗೂ ಸದಸ್ಯರು ಹಾಜರಿದ್ದರು.
ವಂದನಾ ಭಾಸ್ಕರ ಭಟ್ ಪ್ರಾರ್ಥಿಸಿದರು, ಸುಬ್ರಹ್ಮಣ್ಯ ಸ್ವಾಗತಿಸಿದರು, ಗುರುಮೂರ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.