ADVERTISEMENT

ಕಲ್ಲಿಗೆ ಸುಂದರ ರೂಪ ಕೊಡವವ ಶಿಲ್ಪಿ

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2013, 8:59 IST
Last Updated 9 ಡಿಸೆಂಬರ್ 2013, 8:59 IST

ಶಿವಮೊಗ್ಗ: ವಿರೂಪವಿರುವ ಒಂದು ಕಲ್ಲನ್ನು ಒಂದು ಸುಂದರ ಮೂರ್ತಿಯನ್ನಾಗಿಸುವ ಶಕ್ತಿ ಶಿಲ್ಪಿಯಲ್ಲಿರುತ್ತದೆ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.

ನಗರದ ಕೋಟೆ ಬಯಲು ರಂಗಮಂದಿರದಲ್ಲಿ ಭಾನುವಾರ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅವಧೂತ ಪ್ರಕಾಶನ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ‘ಪಂಚಶಿಲ್ಪ ಕಲಾಪ್ರವೀಣ’ ಗ್ರಂಥ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ವಿರೂಪವಾಗಿ ರಸ್ತೆಯಲ್ಲಿ ಬಿದ್ದ ಒಂದು ಕಲ್ಲನ್ನು ತೆಗೆದುಕೊಂಡು ಅದಕ್ಕೆ ಒಂದು ರೂಪ ನೀಡುವ ಸಾಮರ್ಥ್ಯ ಶಿಲ್ಪಿಯಲ್ಲಿರುತ್ತದೆ. ಒಂದು ಅಮೂರ್ತವಾದ ವಸ್ತುವಿಗೂ ಮೂರ್ತ ಸ್ವರೂಪ ನೀಡುವ ಶಿಲ್ಪಿಗೆ ದೇವರ ದರ್ಶನ ಮಾಡಿಸುವ ಕಲೆಗಾರಿಕೆ ಇರುತ್ತದೆ ಎಂದು ಅಭಿಪ್ರಾಯಪಟ್ಟರು.

ನಾವು ಇಂದು ಪರಂಪರೆಗೆ ಬದ್ಧರಾಗಿದ್ದು, ಕ್ಯಾಸೆಟ್‌ಗಳ ಮೂಲಕ ಜಪಮಾಡುವ ಕಲೆಗಾರಿಕೆ ಬೆಳೆಸಿಕೊಂಡಿದ್ದೇವೆ. ಶಿಲ್ಪಿ ರಚಿಸುವ ಕಲಾಕೃತಿಗೆ ಅನುಗುಣವಾಗಿ ಜೀವನ ನಡೆಸುತ್ತಿದ್ದೇವೆ ಎಂದು ಮಾತಿನ ಚಟಾಕಿಯನ್ನಾರಿಸಿದರು.

ಒಬ್ಬ ಶಿಲ್ಪಿಯನ್ನು ಸನ್ಮಾನಿಸಿದರೆ, ಇಡೀ ದೇಶದ ಸಂಸ್ಕೃತಿಯನ್ನು ಸನ್ಮಾನಿಸಿದಂತೆ. ಶಿಲ್ಪಿಗಳು ಸಮಾಜದಲ್ಲಿ ಸಿಗುವುದು ಕಡಿಮೆ. ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಶಿಲ್ಪಿಗಳನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದು ತಿಳಿಸಿದರು.

ಇಂದಿನ ಸಂಸಾರಗಳಲ್ಲಿ ಸಂಸ್ಕಾರವೇ ಇಲ್ಲವಾಗಿ, ಆಚಾರ, ವಿಚಾರಗಳು ಕೂಡ ಮರೆಯಾಗುತ್ತಿವೆ. ನಿರ್ಧಿಷ್ಟ ಆದರ್ಶಗಳನ್ನು ಕುಟುಂಬಗಳು ಮೈಗೂಡಿಸಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಿದೆ. ಸುಖ ಸಂಸಾರಕ್ಕೆ
ಸಂಸ್ಕಾರ ಇರಲೇಬೇಕು. ಅದು ಇದ್ದಾಗ ಮಾತ್ರ ಆದರ್ಶ ಸಂಸಾರ  ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಬಿ.ಪ್ರಸನ್ನಕುಮಾರ, ಇಂದಿನ ಜೀವನವೆಂಬುದು ಗಣಕಯಂತ್ರದ ಸುಳಿಗೆ ಸಿಲುಕಿ, ನಾಗಾಲೋಟದಲ್ಲಿ ಸಾಗುತ್ತಿದೆ. ಗಣಕಯಂತ್ರದ ಪ್ರಭಾವದಿಂದ ಜಗತ್ತಿನಲ್ಲಿ ಅನೇಕ ವಿಸ್ಮಯಗಳು ನಡೆಯುತ್ತಿವೆ. ಆದರೆ, ಇಂದು ನಾವೆಲ್ಲಾ ಅದಕ್ಕೆ ದಾಸರಾಗಿ ಅನೇಕ ಜವಾಬ್ದಾರಿಗಳನ್ನು ಮರೆತು ಜೀವನ ಸಾಗಿಸುತ್ತಿರುವುದು ವಿಪರ್ಯಾಸ ಎಂದರು.

ಶಿಲ್ಪಿ ಕಾಶೀನಾಥ್ ಹಾಗೂ ಲೇಖಕ ದತ್ತಾತ್ರಿ ದಂಪತಿಯನ್ನು ಸನ್ಮಾನಿಸ ಲಾಯಿತು. ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಅಚ್ಯುತರಾವ್ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮ.ಸ.ನಂಜುಂಡಸ್ವಾಮಿ, ವಾಗ್ಮಿ ನಚಿಕೇತ, ಲೇಖಕ ಪ್ರಕಾಶನದ ಎಸ್.ದತ್ತಾತ್ರಿ, ಜಿ.ಎಸ್.ನಟೇಶ್ ಮತ್ತಿತರರು ಉಪಸ್ಥಿತರಿದ್ದರು. ಬಿ.ಕೆ.ವೆಂಕಟೇಶಮೂರ್ತಿ ಸ್ವಾಗತಿಸಿದರು. ಅನಂತಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.