ಶಿವಮೊಗ್ಗ: ದೇಶದ್ರೋಹಿ ಚಟುವಟಿಕೆಗಳಿಗೆ ವಿಶ್ವವಿದ್ಯಾಲಯವನ್ನು ಬಳಸಿಕೊಳ್ಳುತ್ತಿರುವ ಪ್ರಾಧ್ಯಾಪಕರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಕುವೆಂಪು ವಿಶ್ವವಿದ್ಯಾಲಯ ಕೆಲ ಪ್ರಾಧ್ಯಾಪಕರೂ ದೇಶದ್ರೋಹಿ ಘೋಷಣೆ ಕೂಗಿದ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ಶಿಕ್ಷಣ ಕ್ಷೇತ್ರವನ್ನು ಸ್ವಾರ್ಥಕ್ಕಾಗಿ, ದೇಶದ್ರೋಹಿ ಚಟುವಟಿಕೆಗಳಿಗಾಗಿ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಇಂತಹ ಪ್ರಾಧ್ಯಾಪಕರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಕುವೆಂಪು ವಿವಿ ಪ್ರಾಧ್ಯಾಪಕ ರಾಜೇಂದ್ರ ಚೆನ್ನಿ, ಜಗನ್ನಾಥ ಡಾಂಘೆ, ಕೇಶವಯ್ಯ, ಸಣ್ಣಪ್ಪ, ಚೆನ್ನಪ್ಪ, ಕೇಶವ ಶರ್ಮ, ಡಿ.ಎಸ್.ಪೂರ್ಣಾನಂದ ಮತ್ತಿತರರನ್ನು ಉಚ್ಛಾಟಿಸಿ, ದೇಶ ದ್ರೋಹದ ಆಪಾದನೆಯ ಮೇಲೆ ಬಂಧಿಸಬೇಕು ಎಂದು ಒತ್ತಾಯಿಸಿದರು.
ಕೆಲವು ಪ್ರಾಧ್ಯಾಪಕರು ದೇಶದ್ರೋಹಿ ಚಟುವಟಿಕೆಗಳಿಗೆ ವಿಶ್ವ ವಿದ್ಯಾಲಯಗಳನ್ನು ತಾಣ ಮಾಡಿಕೊಂಡಿದ್ದಾರೆ ದೆಹಲಿಯ ಜೆಎನ್ಯು ವಿವಿಯ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಭಯೋತ್ಪಾದಕ ಅಫ್ಜಲ್ ಗುರು ಪರ ಘೋಷಣೆ ಕೂಗಿದ್ದಾರೆ. ಮಾವೋವಾದಿಗಳಿಗೆ ಬಹಿರಂಗ ಬೆಂಬಲ ನೀಡಿದ್ದಾರೆ. ದೇಶ ದ್ರೋಹದ ಘೋಷಣೆ ಕೂಗಿ ದೇಶಪ್ರೇಮಿಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಇಂತಹ ಹೇಳಿಕೆ ನೀಡಿದ ದೇಶದ್ರೋಹಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳು ಹಾಗೂ ರಾಹುಲ್ ಗಾಂಧಿ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಭವಾನಿರಾವ್ ಮೋರೆ, ರಾಜ್ಯ ಕಾರ್ಯದರ್ಶಿ ಹೃಷಿಕೇಶ್ ಪೈ, ಸಾಯಿವರ ಪ್ರಸಾದ್, ಇ. ವಿಶ್ವಾಸ್, ಹಿರಣ್ಣಯ್ಯ , ವಿಕ್ರಂ, ಪ್ರದೀಪ್, ರಾಜೇಶ್ ಕಾಮತ್, ಕುಮಾರಸ್ವಾಮಿ ಇನ್ನಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.