ADVERTISEMENT

ಕೂಲಿ ದರ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 5:50 IST
Last Updated 6 ಜೂನ್ 2013, 5:50 IST

ಶಿವಮೊಗ್ಗ:  ಕೂಲಿ ದರ ಹೆಚ್ಚಳ ಸೇರಿದಂತೆ ಪಿ.ಎಫ್., ಗುರುತಿನ ಚೀಟಿ, ಪಿಂಚಣಿ, ಇ.ಎಸ್.ಐ. ಮತ್ತಿತರ ಸೌಲಭ್ಯಗಳಿಗೆ ಆಗ್ರಹಿಸಿ ಕರ್ನಾಟಕ ಹಣಕಾಸು ನಿಗಮ ನಿಯಮಿತ (ಕೆಎಫ್‌ಸಿಸಿ)ದ ಗೋದಾಮು ಕೂಲಿ ಕಾರ್ಮಿಕರು, ಜಿಲ್ಲಾ ಕೆಎಫ್‌ಸಿಸಿ ಗೋದಾಮಿನ ಹಮಾಲರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆಗಳ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಮೂಟೆ ಹೊತ್ತು ಪ್ರತಿಭಟನೆ ನಡೆಸಿದರು.

ಕೆಎಫ್‌ಸಿಸಿ ಗೋದಾಮಿನಲ್ಲಿ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಾ ಬಂದಿದ್ದು, ತಿಂಗಳಿಗೆ ಕೇವಲ 15ರಿಂದ 20 ದಿವಸ ಮಾತ್ರ ಕೆಲಸ ಇದೆ. ಆದರೆ, ಈ ಕೆಲಸಕ್ಕೆ ತಕ್ಕ ಕೂಲಿ ನಿಗದಿ ಮಾಡಿಲ್ಲ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಸಕ್ತ ವರ್ಷದಿಂದ ಹಮಾಲಿ ದರ ಟೆಂಡರ್ ಮುಖಾಂತರ ಪ್ರತಿ ಕ್ವಿಂಟಲ್‌ಗೆ ಲೋಡಿಂಗ್ರೂ6, ಅನ್‌ಲೋಡಿಂಗ್ರೂ6, ಹರಿದ ಚೀಲಗಳಿಗೆ ದಾಸ್ತಾನು ಅಕ್ಕಿ, ಗೋಧಿ ತುಂಬಿ ಸ್ಕೇಲ್‌ನಲ್ಲಿ ತೂಕ ಮಾಡಲು ಪ್ರತಿ ಕ್ವಿಂಟಲ್ರೂ3ರಂತೆ ಸರಾಸರಿರೂ15ಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಹಾಗೆಯೇ, ಗೋದಾಮಿನಲ್ಲಿ ಕಾರ್ಯನಿರ್ವಹಿಸುವ ಹಮಾಲರಿಗೆ ಗುರುತಿನ ಚೀಟಿ ನೀಡಬೇಕು. ಇದರ ಜತೆಗೆ ಇ.ಎಸ್.ಐ., ಪಿ.ಎಫ್, ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು. ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ಮನವಿ ಮಾಡಿದರೂ ಅವರು ಈ ಬಗ್ಗೆ ಗಮನ ಹರಿಸಿಲ್ಲ ಎಂದು ದೂರಿದರು.

ಈ ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಳಂಬ ಮಾಡಿದರೆ ಜಿಲ್ಲೆಯ ಎಲ್ಲಾ ಕೆಎಫ್‌ಸಿಸಿ ಗೋದಾಮಿನಲ್ಲಿ ಕಾರ್ಯ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾರ್ಮಿಕರು ಎಚ್ಚರಿಕೆ ನೀಡಿದರು.

ನೇತೃತ್ವವನ್ನು ಕಾರ್ಮಿಕರ ಸಂಘದ ಅಧ್ಯಕ್ಷ ಟಿ.ಅನಿಲ್‌ಕುಮಾರ್, ಉಪಾಧ್ಯಕ್ಷ ಬೋರೆಗೌಡ, ಪದಾಧಿಕಾರಿಗಳಾದ ರವಿಕುಮಾರ್, ಶಬೀರ್, ನಜೀರ್ ಅಹಮದ್, ಈಶ್ವರ್ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.