ADVERTISEMENT

ಗೋರಖ್‌ಸಿಂಗ್ ವರದಿ ಅನುಷ್ಠಾನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 9:00 IST
Last Updated 13 ಅಕ್ಟೋಬರ್ 2012, 9:00 IST

ಶಿವಮೊಗ್ಗ: ಗೋರಖ್‌ಸಿಂಗ್ ವರದಿಯ ಶೀಘ್ರ ಅನುಷ್ಠಾನ ಹಾಗೂ ಅಡಿಕೆ ಬೆಳೆಗಾರರ ಸಾಲ ಮನ್ನಾ ಸೇರಿದಂತೆ ಕೆಲವು ರೈತ ಪರ ಯೋಜನೆಗಳನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಅಡಿಕೆ ಬೆಳೆಗಾರರ ಹಿತರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿದವು.

ಅಡಿಕೆ ಬೆಳೆಗಾರರ ಪರವಾಗಿ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್, ಗೋರಖ್‌ಸಿಂಗ್ ವರದಿಯನ್ನು ಶೀಘ್ರ ಜಾರಿಗೊಳಿಸುವಂತೆ ನೀಡಿದ ಆದೇಶ ಹೊರಬಿದ್ದು ತಿಂಗಳಾದರೂ ಯಾವುದೇ ನಿರ್ಣಯಗಳನ್ನು ಸರ್ಕಾರ ತೆಗೆದುಕೊಂಡಿಲ್ಲ. ಶೀಘ್ರ ವರದಿ ಅನುಷ್ಠಾನಗೊಳಿಸಬೇಕು ಎಂದು ಪ್ರಧಾನಮಂತ್ರಿಗೆ, ಜಿಲ್ಲಾಧಿಕಾರಿ ಮೂಲಕ ಮನವಿ ಮಾಡಿದರು.

ಅಲ್ಲದೇ, ಮಲೆನಾಡು ಭಾಗದ ತಾಲ್ಲೂಕುಗಳ ಅಡಿಕೆ ಬೆಳೆಗಾರರೊಂದಿಗೆ ರಾಜ್ಯದ ಎಲ್ಲಾ ಭಾಗದ ಸಣ್ಣ ಮತ್ತು ಮಧ್ಯಮ ಅಡಿಕೆ ಬೆಳೆಗಾರರನ್ನು ಸೇರಿಸಿ, ಹೈಕೋರ್ಟ್ ಇತ್ತೀಚೆಗೆ ನೀಡಿರುವ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ವರದಿ ಜಾರಿಗೆ ಒತ್ತಾಯಿಸಿ ಕಳೆದ ಒಂದೂವರೆ ವರ್ಷದಲ್ಲಿ ನೂರಾರು ಪ್ರತಿಭಟನೆಗಳು, ಅಹೋರಾತ್ರಿ ಧರಣಿಗಳು ನಡೆದರೂ, ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ರಾಜ್ಯ ಸಹಕಾರಿ ರೈತರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಕಾರ್ಯಾಧ್ಯಕ್ಷ ಬಿ.ಆರ್. ಜಯಂತ್, ಮಲೆನಾಡು ಸಂಘರ್ಷ ಸಮಿತಿ ಅಧ್ಯಕ್ಷ ಹೊಸಕೊಪ್ಪ ಸುಂದರೇಶ್, ಸಹ್ಯಾದ್ರಿ ಅಡಿಕೆ ಸಹಕಾರ ಸಂಘದ ವಿಜಯದೇವ್, `ಶಿಮುಲ್~ ಅಧ್ಯಕ್ಷ ಕೆ.ಎಲ್. ಜಗದೀಶ್ವರ್, ನಮ್ಮ ಹಕ್ಕು ವೇದಿಕೆ ಕೆ.ಪಿ. ಶ್ರೀಪಾಲ, ಕೊಡಚಾದ್ರಿ ಟ್ರಸ್ಟ್‌ನ ರಾಜ್‌ಶೇಖರ್ ಪಾಟೀಲ್, ನಾಗರಾಜ ಹರತಾಳ, ಮುಖಂಡರಾದ ದಿನೇಶ್ ಹುಲ್ಲತ್ತಿ, ಶಶಿಧರ, ಶಿವಕುಮಾರ್, ಎನ್.ಎಂ. ಸೋಮಶೇಖರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.