ADVERTISEMENT

ಗ್ರಾಮೀಣ ಜನರಿಗೆ ಸಾಮಾಜಿಕ ತಿಳಿವಳಿಕೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 5:36 IST
Last Updated 7 ಡಿಸೆಂಬರ್ 2012, 5:36 IST

ಕಾರ್ಗಲ್: ಸಮಾಜದ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಸಾಮಾಜಿಕ ತಿಳಿವಳಿಕೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯವಿದೆ ಎಂದು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ಜೆ. ರವಿಕುಮಾರ್ ಹೇಳಿದರು.

ಇಲ್ಲಿನ ಕುವೆಂಪು ರಂಗಮಂದಿರದ ಒಳಾಂಗಣದಲ್ಲಿ ಶರಾವತಿ ವನ್ಯಜೀವಿ ಅರಣ್ಯ ಇಲಾಖೆ ಗುರುವಾರ ಹಮ್ಮಿಕೊಂಡಿದ್ದ ಉಪ ವಿಭಾಗಮಟ್ಟದ ಪರಿಸರ ಅಭಿವೃದ್ಧಿ ಸಮಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಭಾರಂಗಿ ಹೋಬಳಿ ವ್ಯಾಪ್ತಿಯ ಶರಾವತಿ ವನ್ಯಜೀವಿ ವಲಯದ ಅರಲಗೋಡು ಗ್ರಾಮ ಪಂಚಾಯ್ತಿಯ 8 ಪರಿಸರ ಅಭಿವೃದ್ಧಿ ಸಮಿತಿಗಳಿಗೆ ಆರ್ಥಿಕ ಸ್ವಾವಲಂಬನೆ ಹೊಂದುವ ಉದ್ಧೇಶದಿಂದ ತಲಾರೂ. 1 ಲಕ್ಷದಂತೆ,ರೂ. 8 ಲಕ್ಷ ಸುತ್ತು ನಿಧಿ ಸಾಲ ಸೌಲಭ್ಯ ಒದಗಿಸಲಾಗಿದೆ.

ಗ್ರಾಮೀಣ ಪ್ರದೇಶದ ನಾಗರಿಕರಿಗೆ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳ ಅರಿವು ಇದ್ದಾಗ ಮಾತ್ರ ಸರ್ಕಾರದ ಯೋಜನೆಗಳು ಫಲಕಾರಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ವನ್ಯಜೀವಿ ಅರಣ್ಯ ಇಲಾಖೆ ಅಡಿಯಲ್ಲಿ ಜನಜಾಗೃತಿ ಮತ್ತು ಪರಿಸರ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ಪರಿಣಾಮಕಾರಿ ಆಗಿ ನಡೆಸಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದರು.

ಶರಾವತಿ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಜೆ. ರವಿಕುಮಾರ್ ಮತ್ತು ಸಾಗರ ಉಪ ತಹಶೀಲ್ಧಾರ್ ಸೈಯ್ಯದ್ ಝಹೀರುಲ್ಲಾ ಮಾತನಾಡಿ, ಸರ್ಕಾರದಿಂದ ದೊರೆಯುವ ವಿವಿಧ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಮಹಿಳಾ ಸಂರಕ್ಷಣಾಧಿಕಾರಿ ಸುಧಾನಾಯ್ಕ, ಮಹಿಳಾ ಸಹಾಯವಾಣಿಯ ರಶ್ಮಿ ಮಾತನಾಡಿದರು. ಪರಿಸರ ಅಭಿವೃದ್ಧಿ ಸಮಿತಿಯ ಸುಗಮಗಾರರಾದ ಸುಗುಣಾ ಸತೀಶ್ ಪ್ರಾಸ್ತಾವಿಕ ಮಾತನಾಡಿದರು.

ವಲಯ ಅರಣ್ಯಾಧಿಕಾರಿ ವೀರೇಶ್ ಕಭಿನ್ ಸ್ವಾಗತಿಸಿದರು. ಆರ್.ಡಿ. ಪುಟ್ನಳ್ಳಿ ವಂದಿಸಿದರು. ಸುಗುಣಾ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ವಲಯಾರಣ್ಯಾಧಿಕಾರಿ ಸೋಮರಾಜ್, ಸವಿನಯ ಕಾರ್ಯಕ್ರಮ ಸಂಘಟಿಸಿ ಮೇಲುಸ್ತುವಾರಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.