ADVERTISEMENT

ಗ್ರಾಮೀಣ ಸಂಪ್ರದಾಯ, ವೈಭವ ಕಣ್ಮರೆ

ಸಾಣೇಹಳ್ಳಿ ಶಿವಸಂಚಾರ ನಾಟಕೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 8:57 IST
Last Updated 1 ಏಪ್ರಿಲ್ 2013, 8:57 IST

ಶಿಕಾರಿಪುರ: ಗ್ರಾಮೀಣ ಜೀವನದ ರೂಢಿ ಸಂಪ್ರದಾಯ ಹಾಗೂ ವೈಭವಗಳು ಇಂದು ಮರೆಯಾಗುತ್ತಿವೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್. ಶಾಂತವೀರಪ್ಪ ಗೌಡ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ 3 ದಿನ ಕಾಲ ನಡೆಯುವ ಸಾಣೇಹಳ್ಳಿ ಶಿವಸಂಚಾರ ನಾಟಕೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನ ಬಳಕೆಯಿಂದ ಹಿಂದೆ ಇದ್ದ ಕೃಷಿ ಪದ್ಧತಿಗಳು ಇಂದು ಮರೆಯಾಗುತ್ತಿವೆ. ನಮ್ಮ ಇಂದಿನ ಪೀಳಿಗೆ ಮಕ್ಕಳಿಗೆ ನೇಗಿಲು ಎಂದರೆ ಹೀಗೆ ಇತ್ತು ಎಂದು ಹೇಳುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಮನೆಯ ಗೋಡೆಯಲ್ಲಿಯೇ ಕೃಷಿ ಉಪಕರಣಗಳ ಪ್ರದರ್ಶನ ಮಾಡಿರುವುದು, ಗ್ರಾಮೀಣ ಜೀವನವನ್ನು ಮತ್ತೆ ನೆನಪಿಸುತ್ತದೆ ಎಂದರು.

ಜೆಡಿಎಸ್ ಮುಖಂಡ ಎಚ್.ಟಿ. ಬಳಿಗಾರ್, ಈ ಗುಡಿ ಸಾಂಸ್ಕೃತಿಕ ಕೇಂದ್ರದ ಮೂಲಕ ಸ್ಥಳೀಯ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು.

ಗುಡಿ ಸಾಂಸ್ಕೃತಿಕ ಕೇಂದ್ರದ ಸಂಸ್ಥಾಪಕ ಇಕ್ಬಾಲ್ ಅಹ್ಮದ್ ಪ್ರಾಸ್ತಾವಿಕ ಮಾತನಾಡಿ, ಎಲ್ಲ ಜಾತಿ ಜನಾಂಗದವರು ಹಾಗೂ ಎಲ್ಲ ರಾಜಕೀಯ ಪಕ್ಷದವರು ಭೇದ ಭಾವವಿಲ್ಲದೇ ಈ ಕಲೆಗೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ರಾಜ್ಯ ಉರ್ದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮೌಲಾನಾ ಡಾ.ಅಮ್ಜದ್ ಹುಸೇನ್ ಕರ್ನಾಟಕಿ ಗುಡಿ ಸಾಂಸ್ಕೃತಿಕ ಕೇಂದ್ರ ಸಂಸ್ಥಾಪಕ ಇಕ್ಬಾಲ್ ಅಹಮದ್ ಅವರನ್ನು ಸನ್ಮಾನಿಸಿದರು.

ಪುರಸಭೆ ಸದಸ್ಯ ಎಸ್.ಪಿ. ನಾಗರಾಜಗೌಡ, ಬನ್ನೂರು ಮಂಜಪ್ಪ, ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಹುಚ್ಚರಾಯಪ್ಪ, ಉಪಾಧ್ಯಕ್ಷ ಅರುಣ್‌ಕುಮಾರ್, ಪತ್ರಕರ್ತರು ಹಾಗೂ ಕಲಾವಿದರಾದ ಇ.ಎಚ್. ಬಸವರಾಜ್, ಸುರೇಶ್ ಉಪಸ್ಥಿತರಿದ್ದರು. 3 ದಿನ ನಡೆಯುವ ಈ ನಾಟಕೋತ್ಸವದಲ್ಲಿ ಪ್ರಥಮವಾಗಿ `ಸೂಳೇ ಸನ್ಯಾಸಿ' ನಾಟಕ ಪ್ರದರ್ಶನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.