ADVERTISEMENT

ಚಲೇ ಜಾವ್ ಚಳವಳಿ ಒಂದು ನೆನಪು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 10:40 IST
Last Updated 10 ಆಗಸ್ಟ್ 2012, 10:40 IST

ಶಿಕಾರಿಪುರ: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ಯುವ ಪೀಳಿಗೆ ಸ್ಮರಿಸಬೇಕು ಎಂದು ಶಿಕಾರಿಪುರ ಡಿವೈಎಸ್‌ಪಿ  ಕೆ.ಎಂ. ಶಾಂತರಾಜ್ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಮುಭಾಂಗದಲ್ಲಿರುವ ಈಸೂರು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಅವರಣದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ, ವಾರ್ತಾ ಇಲಾಖೆ ಸಹಯೋಗದೊಂದಿಗೆ ಆಯೋಜಿಸಿದ ಚಲೇ ಜಾವ್ ಚಳವಳಿ ಒಂದು ನೆನಪು ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ನಮ್ಮ ಸ್ವಾತಂತ್ರ್ಯ ಹೋರಾಟಗಾರರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲು ಸೇರಿ, ತುಂಬಾ ಕಷ್ಟ ಅನುಭವಿಸಿ ನಮಗೆ ನೀಡಿದ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಿದೆ. ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಪಾಲಿಸುವಂತಾಗಬೇಕು ಎಂದರು.

ವೃತ್ತ ನಿರೀಕ್ಷಕ ಟಿ.ವಿ. ಸುರೇಶ್ ಮಾತನಾಡಿ, ನಮ್ಮ ದೇಶ ಸ್ವಾತಂತ್ರ್ಯ ಪಡೆಯಲು ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದ ಹೋರಾಟಗಾರರ ತ್ಯಾಗ, ಬಲಿದಾನದ ಕೊಡುಗೆ ಅಪಾರವಾಗಿದೆ. ಇಂತಹ ಒಳ್ಳೆ ಕಾರ್ಯಕ್ರಮಗಳು ಮುಂದಿನ ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡಲು ಸಹಕಾರಿಯಾಗಲಿವೆ ಎಂದರು.
ಹಿರಿಯ ಪತ್ರಕರ್ತ ಎಸ್.ಬಿ. ಮಠದ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಹುಚ್ಚರಾಯಪ್ಪ ಮಾತನಾಡಿದರು.

ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು, ಪಟ್ಟಣ ಠಾಣೆ ಪಿಎಸ್‌ಐ ಗುರುರಾಜ್ ಮೈಲಾರ್, ಹಿರಿಯ ಪತ್ರಕರ್ತರಾದ               ವೇಣುಗೋಪಾಲ್, ಗಂಗಾಧರ್, ಅರುಣ್‌ಕುಮಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ. ಸುದರ್ಶನ್, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಗಿಡ್ಡಪ್ಪ, ಜೈನ್ ಇರಿಗೇಶನ್ ಸಂಸ್ಥೆ ಎಂಜಿನಿಯರ್ ಶಿವಾನಂದ್, ಮಹಾದೇವ ಮೇಸ್ರ್ತಿ, ಎನ್‌ಸಿಸಿ ಕೆಡೆಟ್‌ಗಳು, ವಿದ್ಯಾರ್ಥಿ ಗಳು, ನಾಗರಿಕರು, ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ನೆನಪಿಗಾಗಿ ಸ್ಮಾರಕದ ಸುತ್ತಲೂ ಗಣ್ಯರು ಸಸಿಗಳನ್ನು ನೆಡುವ ಮೂಲಕ ಉತ್ತಮ ಹಸಿರು ಪರಿಸರಕ್ಕೆ ಚಾಲನೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.