ADVERTISEMENT

ಚಿತ್ರಕಲೆ ಮಾನವನ ಮೊದಲ ಭಾಷೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 9:30 IST
Last Updated 4 ಜನವರಿ 2011, 9:30 IST

ಸೊರಬ: ‘ಸಂಸ್ಕೃತಿಯ ಮೊದಲ ಭಾಷೆಯೇ ಚಿತ್ರಕಲೆ. ಪ್ರೋತ್ಸಾಹದ ಕೊರತೆಯನ್ನು ಅದು ಎದುರಿಸುತ್ತಿದ್ದು, ಸುಪ್ತ ಪ್ರತಿಭೆಯ ಅನಾವರಣಕ್ಕೆ ಅವಕಾಶ ಬಳಸಿಕೊಳ್ಳಬೇಕು’ ಎಂದು ಶಿವಮೊಗ್ಗದ ಹಿರಿಯ ಚಿತ್ರ ಕಲಾವಿದ ಎಸ್.ಆರ್. ವೆಂಕಟೇಶ್ ಕರೆ ನೀಡಿದರು. ಸೋಮವಾರ ಆನವಟ್ಟಿಯ ಗುರುಭವನದಲ್ಲಿ ರಾಜ್ಯ ಲಲಿತ ಕಲಾ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ತಿಂಗಳ ಚಿತ್ರಕಲಾ ಪ್ರದರ್ಶನದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಅಕಾಡೆಮಿ ಸದಸ್ಯ ಕೆ.ಬಿ. ವಸಂತಕುಮಾರ್ ಮಾತನಾಡಿ, ಶಿಬಿರ ಜ. 6ರವರೆಗೆ ನಡೆಯಲಿದ್ದು, ಚಿತ್ರಕಲೆ ಬಗ್ಗೆ ಉಪನ್ಯಾಸ, ಪ್ರಾತ್ಯಕ್ಷಿಕೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ನಾಡಿನ ಖ್ಯಾತಕಲಾವಿದರ ಶ್ರೇಷ್ಠ ಚಿತ್ರಕಲಾ ಪ್ರದರ್ಶನ ಪ್ರತಿದಿನ ಲಭ್ಯ ಇರುತ್ತದೆ ಎಂದು ಮಾಹಿತಿ ನೀಡಿದರು. ಸರ್ಕಾರಿ ಪ್ರಥಮದರ್ಜೆ ಕಾಲೇಜುಪ್ರಾಂಶುಪಾಲ ಪ್ರೊ.ಎಂ. ನಾರಾಯಣಪ್ಪ ಕಾರ್ಯಕ್ರಮ ಉದ್ಘಾಟಿಸಿದರು.

ಜಿ.ಪಂ. ಮಾಜಿ ಸದಸ್ಯ ಎ.ಎಲ್. ಅರವಿಂದ್, ಪ.ಪೂ. ಕಾಲೇಜು ಪ್ರಾಂಶುಪಾಲ ಎಚ್. ಜಯಪ್ಪ, ಡಿ.ಇಡಿ ಕಾಲೇಜು ಅಧೀಕ್ಷಕ ಪ್ರಕಾಶ್ ಇ. ತಹಶೀಲ್ದಾರ್, ಶಿರಾಳಕೊಪ್ಪ ಸಿಪಿಐ ಸುರೇಶ್ ಉಪಸ್ಥಿತರಿದ್ದರು. ಬಿಇಒ ಪಿ. ಹಾಲನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯಲ್ಲಿ ಸೊರಬದ ವಿಕಾಸ್ ಟೇಮ್ಕರ್, ಆನವಟ್ಟಿಯ ಎಂ. ಅಜಿತ್‌ಕುಮಾರ್,ಹಳೇಸೊರಬದ ಬಿ.ಕೆ. ಸಂಜಯ್ ಕ್ರಮವಾಗಿ ಮೊದಲ ಮೂರು ಬಹುಮಾನಪಡೆದರು.

ಆರ್.ಎಸ್. ರಾಜೇಶ್ ಕುಂಚ ಕಲೆ ಪ್ರದರ್ಶಿಸಿದರು. ದೀಪಾ ಸಂಗಡಿಗರು ಪ್ರಾರ್ಥಿಸಿದರು. ರಾಥೋಡ್ ಸ್ವಾಗತಿಸಿದರು. ಸಂತೋಷ್‌ಪಾಟೀಲ್ ವಂದಿಸಿದರು. ಎಚ್.ಸಿ. ಹೂಗಾರ್ ಕಾರ್ಯಕ್ರಮ ನಿರೂಪಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.