ADVERTISEMENT

ಚುನಾವಣೆ ಎದುರಿಸಲು ಸಿದ್ಧರಾಗಿ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 7:55 IST
Last Updated 18 ಜನವರಿ 2012, 7:55 IST

ಸೊರಬ: `ಚುನಾವಣೆ ಯಾವಾಗ ಬರುತ್ತದೆ ಎಂದು ಹೇಳಲಾಗದು. ಅದನ್ನು ಎದುರಿಸಲು ಈಗಿನಂದಲೇ ಸನ್ನದ್ಧರಾಗಬೇಕು~ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಧು ಬಂಗಾರಪ್ಪ ಕರೆ ನೀಡಿದರು.

ಮಂಗಳವಾರ ಚಂದ್ರಗುತ್ತಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಶ್ರದ್ಧಾಂಜಲಿ ಸಭೆ ಹಾಗೂ ಮಧು ಬಂಗಾರಪ್ಪಗೆ ನೈತಿಕ ಸ್ಥೈರ್ಯ ತುಂಬಲು ಕಾರ್ಯಕರ್ತರು ಹಮ್ಮಿಕೊಂಡಿದ್ದ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಬಂಗಾರಪ್ಪ ವಿರುದ್ಧ ಸಿಬಿಐನಲ್ಲಿ ಪ್ರಕರಣ ದಾಖಲಿಸಿದ್ದು, ಕಾಂಗ್ರೆಸ್ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದ ಅವರು, ಬಂಗಾರಪ್ಪರಂತಹ `ಕ್ಲೀನ್~ ವ್ಯಕ್ತಿ ಇಡೀ ರಾಜ್ಯದಲ್ಲಿ ಸಿಗುವುದಿಲ್ಲ. ಕಷ್ಟದಲ್ಲಿ ಇದ್ದವರಿಗೆ ಸ್ಪಂದನೆ ನೀಡುವುದೇ ಪೂಜಾ ಕಾರ್ಯ ಎಂದು ಅವರು ಭಾವಿಸಿದ್ದರು.

ಅದೇ ರೀತಿ ಜನತೆಯ ನೋವು- ನಲಿವಿಗೆ ಸ್ಪಂದಿಸುತ್ತೇನೆ. ಈಗಾಗಲೇ, 2 ಬಾರಿ ಸೋಲು ಕಂಡಿದ್ದರೂ ಧೃತಿಗೆಡುವುದಿಲ್ಲ. ಹೆದರುವ ಅಗತ್ಯ ಇಲ್ಲ ಎಂದು ತಂದೆ ಹೇಳಿಕೊಟ್ಟಿದ್ದಾರೆ. ಅವರ ನೈತಿಕ ಬೆಂಬಲದೊಂದಿಗೆ ಅವರಿಗೆ ತಾಲ್ಲೂಕಿನ ಜನತೆ ನೀಡಿದ್ದ ಅಪಾರ ಅಭಿಮಾನ ನನ್ನ ಜತೆಗಿದೆ ಎಂದರು.

`ತಂದೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ~ ಎಂದು ಗದ್ಗದಿತರಾಗಿ ನುಡಿದ ಅವರು, `ಅವರು ಇಲ್ಲದೇ ಕ್ಷಣಕ್ಷಣವೂ ಕಷ್ಟ ಎನ್ನಿಸುತ್ತದೆ. ಆದರೆ, ನಿಮ್ಮಲ್ಲಿಯೇ ನಾನು ಅವರನ್ನು ಕಾಣುತ್ತಿದ್ದೇನೆ~.

`ಒಳ್ಳೆಯ ರೀತಿಯಲ್ಲಿ ಹಾಗೂ ನಿಸ್ವಾರ್ಥದಿಂದ ರಾಜಕಾರಣ ಮಾಡುವುದೇ ನನ್ನ ಗುರಿ. ತಂದೆ ಹಾಗೂ ತಾಲ್ಲೂಕಿನ ಜನತೆಯ ಘನತೆಗೆ ಕುಂದು ತರದಂತೆ ಅವರು ಕಷ್ಟಪಟ್ಟು ಬೆಳೆಸಿದ ರಾಜಕಾರಣವನ್ನು ಮುಂದುವರಿಸಿಕೊಂಡು ಹೋಗುತ್ತೇನೆ~ ಎಂದು ಭರವಸೆ ನೀಡಿದ ಅವರು, ತಂದೆ-ತಾಯಿಯ ಆಸೆಯನ್ನು ಜನತೆ ನೆರವೇರಿಸುವರು ಎಂಬ ವಿಶ್ವಾಸ ತಮಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಸಭೆಗೆ ಮುನ್ನ ಪ್ರಸಿದ್ಧ ಮಂಚಿ ಹನುಮಂತದೇವರ ಕ್ಷೇತ್ರ, ಚಂದ್ರಗುತ್ತಿಯ ರೇಣುಕಾಂಬಾ ದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು.

ಮುಖಂಡರಾದ ಎಚ್. ಗಣಪತಿ, ಶ್ರೀಪಾದರಾವ್, ತಾಳಗುಪ್ಪದ ಕುಗ್ವೆ ಶಿವಾನಂದಪ್ಪ, ತಾ.ಪಂ. ಸದಸ್ಯ ಕೆ. ಅಜ್ಜಪ್ಪ, ಬರಗಿ ನಿಂಗಪ್ಪ, ಎನ್. ಕುಮಾರ್, ಜೆ. ಚಂದ್ರಶೇಖರ್, ಉಮಾಪತಿ, ಎಂ.ಡಿ. ಶೇಖರ್, ಸುಧಾಕರ, ಸುಧಾಕರ ನಾಯ್ಕ, ಸುನೀಲ್‌ಗೌಡ, ಗ್ರಾ.ಪಂ. ಅಧ್ಯಕ್ಷ ಮಾರ‌್ಯಪ್ಪ, ಜಯಶೀಲಗೌಡ,ಬೀರೇಶ್, ಧರ್ಮಪ್ಪ, ಶಿವಕುಮಾರ್‌ಗೌಡ, ರತ್ನಾಕರ್, ರಾಧಮ್ಮ, ಅಣ್ಣಪ್ಪ, ಪರಶುರಾಮ್, ಪ.ಪಂ. ಉಪಾಧ್ಯಕ್ಷ ಪ್ರಶಾಂತ್‌ಮೇಸ್ತ್ರಿ, ಸದಸ್ಯ ಮಂಚಿ ಸೋಮಪ್ಪ, ಅಶೋಕ್, ಶಿವಾನಂದಪ್ಪ, ಮಧು ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.