ADVERTISEMENT

‘ಜಾಗೃತರಾಗಿ ಪ್ರತಿನಿಧಿ ಆಯ್ಕೆ ಮಾಡಿ’

ಜಿಲ್ಲಾಡಳಿತ ವತಿಯಿಂದ ಮತ ಜಾಗೃತಿಗಾಗಿ ಜಾದೂ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:21 IST
Last Updated 18 ಜೂನ್ 2018, 13:21 IST

ಶಿವಮೊಗ್ಗ: ಜಾಗೃತ ಮತದಾರರು ಲೋಕಸಭೆ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ದನ್ ತಿಳಿಸಿದರು.

ನಗರದ ನೆಹರೂ ಕ್ರಿಡಾಂಗಣದಲ್ಲಿ ಶನಿವಾರ ಮತದಾರರ ಜಾಗೃತಿ ಅಂಗವಾಗಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಪ್ರಶಾಂತ್ ಜಾದೂಗಾರ್ ಅವರಿಂದ ಮತ ಜಾಗೃತಿ ಜಾದೂ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಭುಗಳು. ಚುನಾವಣೆಯಲ್ಲಿ ತಮ್ಮ ಭಾಗವಹಿಸುವಿಕೆ ಅತ್ಯಂತ ಪ್ರಮುಖ ಪಾತ್ರವಾಗಿದ್ದು, ಎಲ್ಲಾ ಮತದಾರರು ಜಾಗೃತರಾಗಿ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವಂತೆ ಸಲಹೆ ನೀಡಿದರು.

ಚುನಾವಣಾ ಆಯೋಗವು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕೆ ಒತ್ತು ನೀಡಿ ಹಲವು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮತದಾರರು ಆಯೋಗದ ಉದ್ದೇಶಗಳನ್ನು ತಿಳಿದು, ಚುನಾವಣೆಯಲ್ಲಿ ಭಾಗವಹಿಸಬೇಕು ಎಂದರು.

ನಂತರ ಜಾದೂಗಾರ ಪ್ರಶಾಂತ್ ಎಸ್.ಹೆಗಡೆ, ಇಬ್ಬರು ಮಕ್ಕಳೊಂದಿಗೆ ರಾಷ್ಟ್ರಧ್ವಜ, ಹಾರ, ಪುಷ್ಪ, ಭಾವಚಿತ್ರ, ಹಗ್ಗ ಕತ್ತರಿಸುವುದು ಮತ್ತು ಪುನಃ ಜೋಡಿಸುವುದು ಸೇರಿದಂತೆ ಹಲವು ವಿಸ್ಮಯಗಳನ್ನು ಜಾದೂ ಮೂಲಕ ತೋರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ವಾರ್ತಾಧಿಕಾರಿ ಹಿಮಂತರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.