ADVERTISEMENT

ಜಿಲ್ಲಾಧಿಕಾರಿ ವರ್ಗಾವಣೆಗೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2012, 19:30 IST
Last Updated 26 ಜನವರಿ 2012, 19:30 IST

ಶಿವಮೊಗ್ಗ: ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರ ವರ್ಗಾವಣೆ ವಿರೋಧಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದ ಪೊನ್ನುರಾಜ್ ಅವರ ಡಿಢೀರ್ ವರ್ಗಾವಣೆ ಆದೇಶವನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ಒಕ್ಕೂಟದ ಸದಸ್ಯರು ಆಗ್ರಹಿಸಿದರು.

ಜಿಲ್ಲಾದ್ಯಂತ ರಸ್ತೆ ವಿಸ್ತರಣೆ, ನೆಹರು ಕ್ರೀಡಾಂಗಣವನ್ನು ಕ್ರೀಡೆಗೋಸ್ಕರ ಮೀಸಲುಪಡಿಸಿದ್ದು, ವಾಣಿಜ್ಯ ಸಂಕೀರ್ಣಗಳಲ್ಲಿ ಕಡ್ಡಾಯವಾಗಿ ಪಾರ್ಕಿಂಗ್, ಕನ್ಸರ್‌ವೆನ್ಸಿಯಲ್ಲಿ ಫುಡ್‌ಕೋರ್ಟ್, ಗಾಂಧಿಪಾರ್ಕ್ ಅಭಿವೃದ್ಧಿ, ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ, ಅಕ್ರಮ ಮರಳುಗಾರಿಕೆಗೆ ಕಡಿವಾಣ, ಎಸ್.ಆರ್. ದರ ಮೀರದಂತೆ ಗುತ್ತಿಗೆ ನೀಡಲು ನಗರಸಭೆಗೆ ಆದೇಶ. ಹೀಗೆ ಹತ್ತು ಹಲವಾರು ಆದೇಶಗಳ ಮುಖಾಂತರ ಜನತೆಯ ವಿಶ್ವಾಸ ಗೆದ್ದಿದ್ದರು. ಅವರ ಆವಶ್ಯಕತೆ ಜಿಲ್ಲೆಗೆ ಇನ್ನೂ ಇದೆ. ಹಾಗಾಗಿ, ಅವರ ವರ್ಗಾವಣೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.

ಪೊನ್ನುರಾಜ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುವ ಕನಸು ಕಂಡಿದ್ದರು. ಇನ್ನೊಂದು ಎರಡು ವರ್ಷ ಅವರ ಸೇವೆ ಜಿಲ್ಲೆಗೆ ಅಗತ್ಯವಿದೆ. ತಮ್ಮ ಅಧಿಕಾರಾವಧಿಯಲ್ಲಿ ಪೊನ್ನುರಾಜ್ ಭದ್ರಾವತಿ-ಶಿವಮೊಗ್ಗ ಮಹಾಯೋಜನೆ ರೂಪಿಸುವಲ್ಲಿ ಶ್ರಮ ವಹಿಸಿದ್ದರು. ಅಕ್ರಮ ಎಸಗಿದ ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದ್ದ ಉದಾಹರಣೆಗಳು ಇವೆ. ಹಾಗಾಗಿ, ಇಂತಹ ಪ್ರಾಮಾಣಿಕ ಅಧಿಕಾರಿ ಜಿಲ್ಲೆಯಲ್ಲೇ ಇರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಒಕ್ಕೂಟದ ಸದಸ್ಯರಾದ ಡಾ.ಸತೀಶ್‌ಕುಮಾರ್ ಶೆಟ್ಟಿ, ಎಸ್.ಬಿ. ಅಶೋಕ್‌ಕುಮಾರ್, ದಿವಾಕರ ಹೆಗ್ಡೆ, ಸಿ. ರುದ್ರೇಶ್, ಎಂ.ಎನ್. ಖಾನ್, ರವಿಕೃಷ್ಣನ್, ಶಿವು, ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.