ADVERTISEMENT

ಜಿಲ್ಲೆಯ ವಿವಿಧೆಡೆ ಮಳೆ ಅಬ್ಬರ: ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 6:02 IST
Last Updated 4 ಜುಲೈ 2013, 6:02 IST

ತೀರ್ಥಹಳ್ಳಿ: ತಾಲ್ಲೂಕಿನಾದ್ಯಂತ ಸುರಿಯುತ್ತಿರುವ  ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ ವಾಗಿದೆ. ಮಂಗಳವಾರದಿಂದ ಆರಂಭಗೊಂಡ ಮಳೆ ಎಡೆಬಿಡದೇ ಸುರಿಯುತ್ತಿದೆ. ದಟ್ಟವಾಗಿ ಆವರಿಸಿರುವ ಕರಿ ಮೋಡಗಳು ನಡು ಹಗಲನ್ನೂ ಮಂದವಾಗಿಸಿ ಕತ್ತಲು ಆವರಿಸಿದಂತಾಗಿದೆ.

ತಾಲ್ಲೂಕಿನ ಪ್ರಮುಖ ನದಿಗಳಾದ ತುಂಗಾ, ಮಾಲತಿ, ಕುಶಾವತಿ ಹೊಳೆ, ಕುಂಟೇಹಳ್ಳ, ಬ್ಯಾರೇಹಳ್ಳ, ದೇಗೀಹಳ್ಳ ತುಂಬಿ ಹರಿಯುತ್ತಿವೆ. ಬೆಟ್ಟಗುಡ್ಡಗಳಲ್ಲಿನ ನೀರಿನಿಂದಾಗಿ ಸಣ್ಣ, ಪುಟ್ಟ ಹಳ್ಳ ಕೊಳ್ಳಗಳು ತುಂಬಿ ಭೋರ್ಗೆರೆಯುತ್ತಿವೆ.
ಶಿವಮೊಗ್ಗ, ಆಗುಂಬೆ, ಉಡುಪಿ ನಡುವಿನ ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಮಂಡಗದ್ದೆಯಲ್ಲಿನ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ತುಂಗಾ ನದಿಯ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ರಸ್ತೆ ಸಂಚಾರ ಬುಧವಾರ ಬೆಳಿಗ್ಗೆಯಿಂದ ಸ್ಥಗಿತಗೊಂಡಿದೆ.

ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಆಗುಂಬೆ ಹೋಬಳಿಯ ಘಟ್ಟ ಸಾಲಿನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಮಾಲತಿ ನದಿ ಅಪಾಯದ ಮಟ್ಟ ಮೀರಿ ತುಂಬಿ ಹರಿಯುತ್ತಿದೆ. ಕಲ್ಮನೆ, ಲಕ್ಕುಂದ ಬಳಿ ನದಿಯ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ತೀರ್ಥಹಳ್ಳಿ, ಆಗುಂಬೆ ನಡುವೆ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಶೃಂಗೇರಿ ಭಾಗದಲ್ಲಿ ಮಳೆ ಹೆಚ್ಚಾಗಿರುವುದರಿಂದ ತುಂಗಾ ನದಿ ತುಂಬಿ ಹರಿಯುತ್ತಿದೆ. ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ರಾಮಮಂಟಪ ಮುಳುಗುವ ಹಂತದಲ್ಲಿದೆ. ಮಂಡಗದ್ದೆಯ ಪ್ರಸಿದ್ಧ ಪಕ್ಷಿಧಾಮಕ್ಕೆ ಧಕ್ಕೆಯಾಗಿದ್ದು ಪ್ರವಾಹದಲ್ಲಿ ಪಕ್ಷಿಗಳು ಕಟ್ಟಿದ್ದ ಗೂಡುಗಳು ನೀರಪಾಲಾಗುತ್ತಿವೆ. ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದರೆ ತೂದೂರು, ಮಾಳೂರು, ಬೇಗುವಳ್ಳಿ ಸೇರಿದಂತೆ ನದಿ ಪಕ್ಷದಲ್ಲಿರುವ ರಸ್ತೆ ಮುಳುಗಲಿದ್ದು ಸಂಚಾರಕ್ಕೆ ಅಡಚಣೆಯುಂಟಾಗಲಿದೆ.

ರಂಜದಕಟ್ಟೆ, ನಾಬಳ, ಲಕ್ಕುಂದದಲ್ಲಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ತಾಲ್ಲೂಕಿನ ಅನೇಕ ಕಡೆಗಳಲ್ಲಿ ಗುಡ್ಡಗಳು ಜರಿದಿವೆ. ರಸ್ತೆಯ ಮೇಲೆ ಅಲ್ಲಲ್ಲಿ ಮರಗಳು ಬಿದ್ದಿವೆ. ಆಗುಂಬೆ ಘಾಟಿಯ ಮೂರನೇ ತಿರುವಿನಲ್ಲಿ ರಸ್ತೆ ಮೇಲೆ ಮರ ಬಿದ್ದಿದ್ದರಿಂದ  ಸಂಚಾರಕ್ಕೆ ಅಡಚಣೆಯುಂಟಾಯಿತು. ಕೋಣಂದೂರು ನಾಡ ಕಚೇರಿ ವ್ಯಾಪ್ತಿಯ ಹನಸವಳ್ಳಿಯ ಜಯಾನಂದ ಅವರ ಬಚ್ಚಲು ಕೊಟ್ಟಿಗೆ ಬಿದ್ದಪರಿಣಾಮ ಬೆಂಕಿ ತಗುಲಿ ಹಾನಿ ಸಂಭವಿಸಿದೆ. ಭತ್ತದ ಗದ್ದೆಗಳಲ್ಲಿ ನೀರು ತಂಬಿಕೊಂಡಿದ್ದು ರೈತರು ಸಸಿನಾಟಿಗೆ ಸಿದ್ದಪಡಿಸಿಕೊಂಡಿರುವ ಸಸಿಮಡಿಗಳಿಗೆ ಹಾನಿ ಸಂಭವಿಸಿದೆ.

ನದಿ ದಡದಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ಹೋಗುವಂತೆ ಸೂಚಿಸಲಾಗಿದೆ. ಮಂಡಗದ್ದೆಯಲ್ಲಿ ಪ್ರವಾಹ ಹೆಚ್ಚಾಗಿದ್ದು ಸ್ಥಳಕ್ಕೆ ಪೊಲೀಸರು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಯನ್ನು  ನಿಯೋಜನೆಗೊಳಿಸಲಾಗಿದೆ ಎಂದು ತಹಸೀಲ್ದಾರ್ ಗಣೇಶ ಮೂರ್ತಿ ತಿಳಿಸಿದ್ದಾರೆ.

ಹೊಸನಗರ ವರದಿ
ಹೊಸನಗರ:  ತಾಲ್ಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ಶರಾವತಿ ನದಿಯ ಬಿಳ್ಳೊಡಿ ಸೇತುವೆ ಮೇಲೆ 4 ಅಡಿ ನೀರು ನಿಂತ ಪರಿಣಾಮ ಹೊಸನಗರ-ತೀರ್ಥಹಳ್ಳಿ ಮುಖ್ಯ ರಸ್ತೆ ಸಂಚಾರ ಇಂದು ಸಂಪೂರ್ಣ ಬಂದ್ ಆಗಿತ್ತು.

ಮಳೆಯ ಕಾರಣ ತಾಲ್ಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿತ್ತು. ಆರಗ-ಬೇಳೂರು-ಹಿಲಕುಂಜಿ ಜಿಲ್ಲಾ ಮುಖ್ಯ ರಸ್ತೆಯ ಹೆಣ್ಣಾಬೈಲು ಸೇತುವೆಯು ನೀರಿನ ರಭಸಕ್ಕೆ ಭಾಗಶಃ ಹಾನಿಯಾಗಿರುವುದು ವರದಿಯಾಗಿದೆ.

ತಾಲ್ಲೂಕಿನ ಶರಾವತಿ, ವಾರಾಹಿ, ಚಕ್ರಾ, ಸಾವೆಹಕ್ಕಲು ಜಲಾನಯ ಪ್ರದೇಶಗಳಲ್ಲಿ  ಉತ್ತಮ ಮಳೆಯಾಗುತ್ತಿದ್ದು  ವಾರಾಹಿ ಜಲಾನಯನ ಪ್ರದೇಶವಾದ ಮಾಸ್ತಿಕಟ್ಟೆಯಲ್ಲಿ 395 ಮಿ.ಮೀ ಗರಿಷ್ಠ ಮಳೆಯಾಗಿದೆ. ವಾರಾಹಿ ಜಲಾನಯ ಪ್ರದೇಶವಾದ ಹುಲಿಕಲ್ 393 ಮಿ.ಮೀ,  ಯಡೂರು 295 ಮಿ.ಮೀ, ಮಾಣಿ ಡ್ಯಾಂ 292 ಮಿ.ಮೀ. ಹೊಸನಗರ 292.2 ಮಿ.ಮೀ, ನಗರ 218 ಮಿ.ಮೀ ಮಳೆಯಾಗಿದೆ.

ಸೊರಬ ವರದಿ
ಸೊರಬ: ತಾಲ್ಲೂಕಿನ ವಿವಿಧಡೆ ಸೋಮವಾರ ಸಂಜೆ ಹಾಗೂ ಮಂಗಳವಾರ ದಿನಪೂರ್ತಿ ಸುರಿದ ಮಳೆಯಿಂದಾಗಿ ಸಂಪೂರ್ಣ ಜಲಾವೃತಗೊಂಡಿದ್ದು ವಾಹನಗಳ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

  ತಾಲ್ಲೂಕಿನ ಅನೇಕ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ವರದಾ ನದಿ ಹಾಗೂ ದಂಡಾವತಿ ನದಿಗಳು ತುಂಬಿ ಹರಿಯುತ್ತಿವೆ. ಕೆಲವು ಭಾಗದಲ್ಲಿ ಗಾಳಿ ಸಮೇತ ಮಳೆಯಾಗಿದ್ದರಿಂದ ರಸ್ತೆಗಳ ಮೇಲೆ ಮರಗಳು ಬಿದ್ದು ವಾಹನಗಳು ಚಲಿಸಲು ತೊಂದರೆಯಾಗಿತ್ತು.  ತಾಲ್ಲೂಕಿನ ಓಟೂರು, ಹಳೇಸೊರಬ, ಕೊಡಕಣೆ, ಬಾಸೂರು, ಜಂಗಿನಕೊಪ್ಪ, ಹೊಳೆ ಮರೂರು, ಯಲವಾಟ ಸೇರಿದಂತೆ ಸುತ್ತಮತ್ತಲ ಗ್ರಾಮಗಳಲ್ಲಿ ಭಾರೀ ಮಳೆಯಾಗಿದ್ದು ಕೆರೆಯ ಕೋಡಿ ಒಡೆದು ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ.

ಶಿಕಾರಿಪುರ ವರದಿ
ಶಿಕಾರಿಪುರ: ತಾಲ್ಲೂಕಿನಾದ್ಯಂತ ಸುರಿದ ಮಳೆಯ ಆರ್ಭಟದಿಂದ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಬುಧವಾರ ಮುಂಜಾನೆಯಿಂದ ಸುರಿದ ಮಳೆಯಿಂದ ತಾಲ್ಲೂಕಿನಾದ್ಯಂತ ಇರುವ ಬಹುತೇಕ ಕೆರೆ ಕಟ್ಟೆಗಳು ತುಂಬಿವೆ.
ಮಳೆಯ ಆರ್ಭಟದಿಂದ ಬಹುತೇಕ ಪ್ರಮುಖ ರಸ್ತೆಗಳು ಜಲಾವೃತಗೊಂಡಿವೆ. ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಚಲಿಸುವ ನಂದಿಹಳ್ಳಿ ಹಾಗೂ ತರಲಘಟ್ಟ ಗ್ರಾಮದ ಸಮೀಪದ ರಸ್ತೆಯಲ್ಲಿ  ಮಳೆ ನೀರು ಹರಿಯುತ್ತಿದ್ದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

ಶಿವಮೊಗ್ಗ ಹಾಗೂ ಶಿಕಾರಿಪುರಕ್ಕೆ ಚಲಿಸುವ ವಾಹನಗಳು ಅಂಜನಾಪುರ, ಈಸೂರು  ರಸ್ತೆ ಮೂಲಕ ಸಂಚಾರ ನಡೆಸಿದವು. ಕವಾಸಪುರ ಗ್ರಾಮದ ಸಮೀಪ ನೂತನ ಸೇತುವೆ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಕೊಡಮಗ್ಗಿ, ಮಾರವಳ್ಳಿ, ದಿಂಡದಹಳ್ಳಿ, ಮಾರವಳ್ಳಿ ಮೂಲಕ ವಾಹನ ಸವಾರರು ಸಂಚಾರ ನಡೆಸಿದರು.  ಪಟ್ಟಣದ ನರಸಪ್ಪ ಸ್ಮಾರಕ ಬಯಲು ರಂಗ ಮಂದಿರ ಹಾಗೂ ಎಪಿಎಂಸಿ ಬಳಿಯ ವಾಣಿಜ್ಯ ಮಳಿಗೆ ಸೇರಿದಂತೆ ಪಟ್ಟಣದ ಬಹುತೇಕ ಸ್ಥಳಗಳಲ್ಲಿ ಮಳೆ ನೀರು ನಿಂತಿದ್ದ ದೃಶ್ಯ ಕಂಡು ಬಂದಿತು.

ಸಂಚಾರ ಅಸ್ತವ್ಯಸ್ತ
ಕಾರ್ಗಲ್: ಇಲ್ಲಿಗೆ ಸಮೀಪದ ಜೋಗ ಜಲಪಾತದ ಸೀತಾಕಟ್ಟೆ ಸೇತುವೆ ರಾಷ್ಟ್ರೀಯ ಹೆದ್ದಾರಿ 206ರ ಆಡುಕಟ್ಟಾ ತಿರುವಿನಲ್ಲಿ  ಭೂ ಕುಸಿತದಿಂದ ನಾಲ್ಕೈದು ಮರಗಳು ಹೆದ್ದಾರಿಯ ಮೇಲೆ ಕುಸಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಮಂಗಳವಾರ ನಡೆದಿದೆ.

ಬೆಂಗಳೂರು ಹೊನ್ನಾವರಕ್ಕೆ ಸಂಪರ್ಕ ಕಲ್ಪಿಸುವ ಈ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾದ ಕಾರಣ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಮತ್ತು ಪೋಲೀಸ್ ಇಲಾಖೆ ಕೂಡಲೇ ರಸ್ತೆ ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಉರುಳಿ ಬಿದ್ದ ಮರ
ಕಾರ್ಗಲ್: ವಿಶ್ವ ವಿಖ್ಯಾತ ಜೋಗ ಜಲಪಾತದ ದರ್ಶನಕ್ಕೆ ದಿನಂಪ್ರತಿ ಸಾವಿರಾರು ವಾಹನಗಳು ಬರುತ್ತಿದ್ದು, ವಾಹನಗಳ ನಿಲುಗಡೆ ತಾಣದಲ್ಲಿ ಎತ್ತರದ ಮರಗಳು ಅಪಾಯ ತಂದೊಡ್ಡುವ ಕಾರಣ ಚಾಲಕರು ಆತಂಕಗೊಂಡಿದ್ದಾರೆ.  ಕೂದಲೆಳೆ ಅಂತರದಲ್ಲಿ ಹಲವರು ಅಪಾಯದಿಂದ ಪಾರಾಗಿದ್ದಾರೆ ಎಂದು ಸ್ಥಳೀಯರಾದ ಶ್ರೀನಿವಾಸ್ ತಿಳಿಸಿದ್ದಾರೆ.

ಭಾರೀ ಅನಾಹುತ ಸಂಭವಿಸುವ ಮುಂಚಿತವಾಗಿ ಜೋಗ ನಿರ್ವಹಣಾ ಪ್ರಾಧಿಕಾರ ಇತ್ತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಶಿರಾಳಕೊಪ್ಪ ವರದಿ
ಶಿರಾಳಕೊಪ್ಪ: ಸತತ ಎರಡು ದಿನದಿಂದ ಸುರಿ ಯುತ್ತಿರುವ ಧಾರಾಕಾರ ಮಳೆಗೆ ಬುಧವಾರ ಪಟ್ಟಣದ ಸೊರಬ ರಸ್ತೆಯಲ್ಲಿರುವ ವಡ್ಡಿನ ಕೆರೆ   ಒಡೆದು ಹೋಗಿದ್ದು ಕೆರೆ ಕೆಳಗಿನ ಹೊಲಗಳು ಜಲಾವೃತಗೊಂಡಿವೆ. ಶಿಕಾರಿಪುರ ಹಾಗೂ ಸೊರಬ ತಾಲ್ಲೂಕಿನ ಗಡಿಯಾಗಿರುವ ಪಟ್ಟಣದ ವಡ್ಡಿನ ಕೆರೆಯಿಂದ ಛತ್ರದಹಳ್ಳಿಯ ಸುಮಾರು 200 ಎಕರೆ ಪ್ರದೇಶ ಅಚ್ಚುಕಟ್ಟು ಜಮೀನು ಹೊಂದಿದ್ದು. ವಡ್ಡಿನ ಕಾಲುವೆ ಒಡೆದಿರುವುದರಿಂದ ಸುಮಾರು 20 ಎಕ್ಕರೆ ಜಮೀನಿನಲ್ಲಿ ನೀರು ನಿಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.