ADVERTISEMENT

ತಾಂತ್ರಿಕ ಕೌಶಲಗಳಿಂದ ದೃಶ್ಯ ಶ್ರೀಮಂತ್ರಿಕೆ: ಮೋಹನ್‌

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 6:25 IST
Last Updated 25 ಸೆಪ್ಟೆಂಬರ್ 2013, 6:25 IST

ಶಿವಮೊಗ್ಗ:   ಛಾಯಾಗ್ರಾಹಕರ ಸುದ್ದಿಪ್ರಜ್ಞೆ, ಧ್ವನಿ ಮತ್ತು ಬೆಳಕಿನ ಸಮರ್ಪಕ ಸಾಂದರ್ಭಿಕ ಸಂಯೋಜನೆಯ ತಜ್ಞ ಕೌಶಲ ಸುದ್ದಿವಾಹಿನಿಗಳ ದೃಶ್ಯ ಶ್ರೀಮಂತಿಕೆ ಹೆಚ್ಚಿಸಲು ಸಹಕಾರಿ ಎಂದು ಬೆಂಗಳೂರಿನ ಮಣಿಪಾಲ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆರ್.ಮೋಹನ್ ಅಭಿಪ್ರಾಯಪಟ್ಟರು.

  ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮಂಗಳವಾರ ಹಮ್ಮಿಕೊಂಡಿದ್ದ ‘ಕ್ಯಾಮೆರಾ, ಧ್ವನಿ ಮತ್ತು ಬೆಳಕು’ ಎರಡು ದಿನಗಳ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವರದಿಗಾರರು ಸುದ್ದಿ ವಿವರಗಳ ತೀವ್ರತೆಗೆ ಅನುಗುಣವಾಗಿ ವೀಕ್ಷಕರನ್ನು ತಲುಪುವ ಯಶಸ್ವಿ ಸಂವಹನವನ್ನು ಸಾಧಿಸಲು ಛಾಯಾಗ್ರಾಹಕರ ಬೆಂಬಲ ಇರಲೇಬೇಕಾಗುತ್ತದೆ. ವರದಿಗಾರರು ಭಾಷೆಯ ಮೂಲಕ ವರದಿಯ ವಿವರಗಳನ್ನು ಕೊಟ್ಟರೆ, ಆ ಭಾಷಿಕ ಅಭಿವ್ಯಕ್ತಿಗೆ ದೃಶ್ಯಾತ್ಮಕ ಸ್ಪರ್ಶವನ್ನು ನೀಡಿ ಸಂವಹನದ ಪರಿಣಾಮ ಸಾಧ್ಯತೆಗಳನ್ನು ಹೆಚ್ಚಿಸುವ ಮಹತ್ವದ ಹೊಣೆಗಾರಿಕೆ ಟಿವಿ ಛಾಯಾಗ್ರಾಹಕರದ್ದು ಎಂದು ಹೇಳಿದರು.

ಖ್ಯಾತನಾಮರನ್ನು ಸಂದರ್ಶಿಸಲು ಸುಂದರವಾಗಿರುವ, ಸಂದರ್ಶನ ಕೌಶಲಗಳೇ ಇರದವರನ್ನು ನೇಮಿಸಿದಾಗ ಟೆಲಿವಿಷನ್ ಛಾಯಾ ಗ್ರಾಹಕರು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಡಿ.ಎಸ್.ಪೂರ್ಣಾನಂದ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.