ಶಿವಮೊಗ್ಗ: ‘ಹೇ ಮಗ ನಮ್ ಈಶ್ವರಪ್ಪನೇ ಗೆಲ್ಲೋದು ಕಣೋ’, ‘ಎಷ್ಟು ಬೆಟ್ಸ್ ಕಟ್ತೀಯಾ ಗುರು ಈ ಸಲನೂ ನಮ್ ಪ್ರಸನ್ನಕುಮಾರೇ ಗೆಲ್ಲೋದು’, ‘ಸಾಕ್ ಸುಮ್ಕಿರ್ರಪ್ಪ ನಮ್ ನಿರಂಜನಣ್ಣನೇ ಗೆಲ್ಲೋದು’, ‘ನೀವ್ಯಾಕ್ ಕಿತ್ತಾಡ್ತಿರಾ ಸುಮ್ಕಿರ್ರೋ. ರಿಸಲ್ಟು ಬರ್ಲಿ ಯಾರ್ ಗೆಲ್ಲೋದು ಗೊತ್ತಾಗುತ್ತೆ..’ ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಾಗ ಜಿಲ್ಲೆಯ ಎಲ್ಲೆಡೆ ತಮ್ಮ ತಮ್ಮ ನಾಯಕರ ಪರವಾಗಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ವ್ಯಕ್ತಪಡಿಸುತ್ತಿರುವ ಅಭಿಮಾನದ ಮಾತುಗಳಿವು.
ಒಂದೆರಡು ತಿಂಗಳುಗಳಿಂದ ಜಿಲ್ಲೆಯಲ್ಲಿ ಏರಿದ್ದ ಚುನಾವಣಾ ಪ್ರಚಾರದ ಕಾವು ಈಗ ತಣ್ಣಗಾಗಿದೆ. ಈಗ ಫಲಿತಾಂಶದ ಬಗೆಗಿನ ಚರ್ಚೆ ರಂಗೇರಿದೆ. ಮನೆ, ಕಚೇರಿ, ಹೋಟೆಲ್, ಹಳ್ಳಿಕಟ್ಟೆ, ಕಚೇರಿ, ಬಸ್ಸು, ಕಾರು, ಬೈಕು ಹೀಗೆ ಎಲ್ಲಾ ಕಡೆ ಹಗಲು ರಾತ್ರಿ ಎನ್ನದೇ ಚುನಾವಣೆಯದ್ದೇ ಮಾತುಗಳು ಕೇಳಿ ಬರುತ್ತಿವೆ. ಈ ಬಾರಿ ಶತಾಯಗತಾಯ ಗೆಲ್ಲಲೇ ಬೇಕು ಎಂದು ಪಣತೊಟ್ಟು ಚುನಾವಣಾ ಕಾರ್ಯ ಮುಗಿಸಿರುವ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದಾರೆ. ಇದರ ನಡುವೆ ಅಭಿಮಾನಿಗಳು, ಕಾರ್ಯಕರ್ತರು ಗೆಲುವು ಯಾರದ್ದು ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ.
ತಮ್ಮ ನಾಯಕರ ಪರ ಬೆಟ್ಟಿಂಗ್: ಶಿವಮೊಗ್ಗ ಜಿಲ್ಲೆಯು ಪ್ರಮುಖ ರಾಜಕೀಯ ಪಕ್ಷಗಳ ಶಕ್ತಿಕೇಂದ್ರ ಆಗಿರುವುದರಿಂದ ಇಲ್ಲಿನ ಫಲಿತಾಂಶದ ಮೇಲೆ ರಾಜ್ಯದ ಜನರ ಕಣ್ಣು ನೆಟ್ಟಿದೆ. ಘಟಾನುಘಟಿ ನಾಯಕರ ದಂಡೇ ಜಿಲ್ಲೆಯಲ್ಲಿರುವುದರಿಂದ ಜಿಲ್ಲೆಯ ಚುನಾವಣೆ ಫಲಿತಾಂಶ ಮಹತ್ವ ಪಡೆದುಕೊಂಡಿದೆ. ಇದರ ನಡುವೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಈ ಬಾರಿ ತಮ್ಮ ನಾಯಕರದ್ದೇ ಗೆಲುವು ಎಂಬ ಲೆಕ್ಕಾಚಾರದಲ್ಲಿ ತೆರೆಮರೆಯಲ್ಲಿಯೇ ಬೆಟ್ಟಿಂಗ್ನಲ್ಲಿ ಮುಳುಗಿದ್ದಾರೆ.
ಪಕ್ಷೇತರರ ಮತಗಳ ಮೇಲೆ ಕಣ್ಣು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರು ಪಡೆದ ಮತಗಳು ಪ್ರಬಲ ಅಭ್ಯರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದವು.ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಪ್ರಸನ್ನಕುಮಾರ್ ಕೇವಲ 278 ಹಾಗೂ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ 1,343 ಮತಗಳ ಅಂತರದಿಂದ ಎದುರಾಳಿಗಳನ್ನು ಮಣಿಸಿದ್ದರು. ಇಲ್ಲಿ ಪಕ್ಷೇತರರು ಪಡೆದ ಮತಗಳು ಗೆದ್ದವರಿಗೆ ವರದಾನವಾದರೆ, ಸೋತವರಿಗೆ ಶಾಪವಾಗಿ ಪರಿಣಮಿಸಿದ್ದವು. ಭದ್ರಾವತಿಯಲ್ಲಿ ಪಕ್ಷೇತರ ಅಭ್ಯರ್ಥಿ ಬಿ.ಕೆ.ಸಂಗಮೇಶ್ವರ 34,271 ಮತಗಳನ್ನು ಪಡೆದಿದ್ದರು. ಇದು ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ.ಇಬ್ರಾಹಿಂ ಸೋಲಿಗೂ ಕಾರಣವಾಗಿತ್ತು. ಹಾಗಾಗಿ ಈ ಬಾರಿಯೂ ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಪಕ್ಷೇತರರು ಪಡೆಯುವ ಮತಗಳು ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ. ಪಕ್ಷೇತರ ಅಭ್ಯರ್ಥಿಗಳು ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟು ಮತ ಪಡೆಯುತ್ತಾರೆ. ಆ ಮತಗಳು ತಮ್ಮ ನಾಯಕರ ಗೆಲುವಿಗೆ ಎಷ್ಟು ಪೂರಕವಾಗಲಿವೆ ಮತ್ತು ಮಾರಕವಾಗಲಿವೆ ಎಂದು ಬೆಂಬಲಿಗರು ಲೆಕ್ಕಾಚಾರ ಹಾಕುತ್ತಿದ್ದಾರೆ.
ದೇವರ ಮೊರೆ: ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ದೇವರ ಮೊರೆ ಹೋಗಿದ್ದಾರೆ. ಮೇ 15ರಂದು ಫಲಿತಾಂಶ ಹೊರಬೀಳುವುದರಿಂದ, ಈಗಾಗಲೇ ಕೆಲವರು ದೇವಸ್ಥಾನ, ಪೂಜೆ, ಪುನಸ್ಕಾರ, ಹೋಮ, ಹವನಗಳಲ್ಲಿ ತಲ್ಲೀನರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.