ADVERTISEMENT

ನಾಳೆ ನಿಸಾರ್ ಅಹಮದ್‌ ಗೀತ ಸಂಭ್ರಮೋತ್ಸವ

ತೀರ್ಥಹಳ್ಳಿ: ಶಾಂತವೇರಿ ಗೋಪಲಗೌಡ ಸಮುದಾಯ ಭವನದಲ್ಲಿ ಉತ್ಸವ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 7:58 IST
Last Updated 13 ಡಿಸೆಂಬರ್ 2013, 7:58 IST

ಶಿವಮೊಗ್ಗ: ಬೆಂಗಳೂರಿನ ಸ್ವರಸನ್ನಿಧಿ ಟ್ರಸ್ಟ್ ಹಾಗೂ ತೀರ್ಥಹಳ್ಳಿಯ ಕವಿಶೈಲ ಟ್ರಸ್ಟ್ ಸಂಯುಕ್ತವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಡಿ.14ರಂದು ಬೆಳಿಗ್ಗೆ 9.30ಕ್ಕೆ ಸೊಪ್ಪುಗುಡ್ಡೆಯ ಪುರಪಂಚಾಯ್ತಿ ಆವರಣದ ಶಾಂತವೇರಿ ಗೋಪಾಲಗೌಡ ಸಮುದಾಯ ಭವನದಲ್ಲಿ ನಿಸಾರ್ ಅಹಮದ್‌ ಅವರ ಗೀತ ಸಂಭ್ರಮೋತ್ಸವ, ಕುವೆಂಪು ಪ್ರಶಸ್ತಿ ಪ್ರದಾನ, ಗೀತ ಗಾಯನ ಸ್ಪರ್ಧೆ ಹಾಗೂ ಕಾವ್ಯ ಕುಂಚ ಗಾಯನ, ನೃತ್ಯ ಕಾರ್ಯಕ್ರಮ ಹಮ್ಮಿಕೊಂಡಿವೆ.

ತೀರ್ಥಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸರ್ಕಲ್‌ ಇನ್‌ಸ್ಪೆಕ್ಟರ್‌ ಬಸವರಾಜ್ ಅಧ್ಯಕ್ಷತೆ ವಹಿಸುವರು.

ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಡಿ.ನಾಗೇಂದ್ರ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ್ ಶೆಟ್ಟರ್‌ ಅತಿಥಿಗಳಾಗಿ ಭಾಗವಹಿಸುವರು. ಸ್ವರಸನ್ನಿಧಿ ಟ್ರಸ್ಟ್ ಅಧ್ಯಕ್ಷೆ ಡಾ.ಶಮಿತಾ ಮಲ್ನಾಡ್ ಹಾಗೂ ಕವಿಶೈಲ ಟ್ರಸ್ಟ್ ಅಧ್ಯಕ್ಷ ಏಳುಮನೆ ವಿಜಯ್ (ಬಿಳಿಗಿರಿ) ಉಪಸ್ಥಿತರಿರುವರು.

ಉಳುಕೊಪ್ಪದ ದಿ.ಕೊಲ್ಲೂರಮ್ಮ ವೆಂಕಟರಮಣಗೌಡ ಹಾಗೂ ದಿ.ಸೀತಮ್ಮ ಗುಂಡಪ್ಪಗೌಡ ಹಾಲಿಗೆ ಸ್ಮರಣಾರ್ಥ ಅಂದು ಬೆಳಿಗ್ಗೆ 10.30ಕ್ಕೆ  ನಿಸಾರರ ಗಾಯನ ಸ್ಪರ್ಧೆ, ಸಂಜೆ 5ಕ್ಕೆ ಸಂಗೀತ ನಿರ್ದೇಶಕಿ ಡಾ.ಶಮಿತಾ ಮಲ್ನಾಡ್ ಹಾಗೂ ಸ್ವರ ಸನ್ನಿಧಿ ತಂಡದಿಂದ ‘ನಿಸಾರ್‌ ಅವರ ಗೀತೆಗಳಿಗೆ ಕಾವ್ಯ–ಕುಂಚ ಗೀತಗಾಯನ ನೃತ್ಯ ಹಾಗೂ ಸುಗಮ ಸಂಗೀತ ಕಾರ್ಯಕ್ರಮ’ ನಡೆಯಲಿದೆ.

ಗಾಯನದಲ್ಲಿ ಸಂತೋಷ್, ಶಶಿಕಲಾ, ಜಗದೀಶ್ ಕಣದ ಮನೆ, ಮಾ.ಹೃಷಿಕೇಶ್, ಮಾ.ಅದ್ವೈತ್ ಹೆಗಡೆ, ಕುಂಚದಲ್ಲಿ ಖ್ಯಾತ ಕಲಾವಿದ ಬಾಗೂರು ಮಾರ್ಕಾಂಡೇಯ, ಸವಿಮಾತಿನಲ್ಲಿ ಗಾಯಕ ಕಲಾದೇಗುಲ ಶ್ರೀನಿವಾಸ್, ನಿರೂಪಕ ನಟರಾಜ್ ಶೆಟ್ಟಿಕೆರೆ, ತೀರ್ಥಹಳ್ಳಿ ಸಹ್ಯಾದ್ರಿ ಶಾಲೆ ಮಕ್ಕಳಿಂದ ನಾಡಗೀತೆ ಗಾಯನ ನಡೆಯಲಿದೆ.

ಅಂದು ಸಂಜೆ 4.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭ ಖ್ಯಾತ ಕವಿ, ಪದ್ಮಶ್ರೀ ನಾಡೋಜ ಪ್ರೊ.ನಿಸಾರ್ ಅಹಮದ್ ಸಮಕ್ಷಮದಲ್ಲಿ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಆರಗ ಜ್ಞಾನೇಂದ್ರ ಪ್ರಶಸ್ತಿ ಪ್ರದಾನ ಮಾಡುವರು. ಆರ್.ಮದನ್ ಬಹುಮಾನ ವಿತರಿಸುವರು. ಸಾಹಿತಿ ನಾ.ಡಿಸೋಜಾ ಅವರಿಗೆ ಕುವೆಂಪು ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಭಾಗವಹಿಸುವರು. ಡಾ.ನಿಸಾರ್ ಅಹಮದ್ ಕುರಿತು ಬಾಗೂರು ಮಾರ್ಕಾಂಡೇಯ ಮಾತನಾಡುವರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.