ADVERTISEMENT

ನಾಳೆ ಶಿವಮೊಗ್ಗ ರಂಗಾಯಣ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 9:55 IST
Last Updated 11 ಅಕ್ಟೋಬರ್ 2011, 9:55 IST

ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಅ. 12ರಂದುಸಂಜೆ 5.30ಕ್ಕೆ  `ಶಿವಮೊಗ್ಗ ರಂಗಾಯಣ~ದ ಉದ್ಘಾಟನೆ ನೆರವೇರಲಿದೆ. ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಇದಕ್ಕೆ ಚಾಲನೆ ನೀಡುವರು.

ವಿಶೇಷ ಆಹ್ವಾನಿತರಾಗಿ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಚಿವ ಗೋವಿಂದ ಎಂ. ಕಾರಜೋಳ ಪಾಲ್ಗೊಳ್ಳುವರು. ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಸಂಸದ ಬಿ.ವೈ. ರಾಘವೇಂದ್ರ, ಸಂಗೀತ ನಿರ್ದೇಶಕ ಹಂಸಲೇಖ, ಕುವೆಂಪು ವಿವಿ ಕುಲಪತಿ ಪ್ರೊ.ಎಸ್.ಎ. ಬಾರಿ ಭಾಗವಹಿಸುವರು. ಶಾಸಕ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು ಎಂದು ರಂಗಾಯಣ ನಿರ್ದೇಶಕ ಹೊ.ನ. ಸತ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೆಗ್ಗೋಡಿನ ಮಹಿಳಾ ಡೊಳ್ಳುತಂಡ ಮುಖ್ಯಮಂತ್ರಿ ಸೇರಿದಂತೆ ಅತಿಥಿಗಳನ್ನು ಸ್ವಾಗತಿಸಲಿದೆ. ಅಲ್ಲದೇ, ರಂಗಪ್ರಯೋಗ ತಂಡ `ಜಲಗಾರ~ ನಾಟಕದ ಒಂದು ದೃಶ್ಯ ಪ್ರದರ್ಶಿಸಿ, ರಂಗಸ್ವಾಗತ ನೀಡಲಿದೆ. ತದನಂತರ ಕುವೆಂಪು ಅವರ `ನನ್ನ ಗೋಪಾಲ~ ನಾಟಕವನ್ನು `ನಮ್ ಟೀಮ್?!~ ತಂಡ ಆ.ಚಿ. ನಿರ್ದೇಶನದಲ್ಲಿ ಅಭಿನಯಿಸಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಉಪಸ್ಥಿತರಿದ್ದರು.

 ಸಿಎಂ ಪ್ರವಾಸ
ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಅ. 12ರಂದು ಮಧ್ಯಾಹ್ನ 2.45ಕ್ಕೆ ಶಿವಮೊಗ್ಗಕ್ಕೆ ಆಗಮಿಸುವರು. 3.30ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ವಿಶ್ವಭಾರತಿ ಪ್ರಾಂತೀಯ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.  ಸಂಜೆ 5.30ಕ್ಕೆ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ವಾಸ್ತವ್ಯ ಮಾಡುವರು.

13ರಂದು ಬೆಳಿಗ್ಗೆ 8ಕ್ಕೆ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಮನೆಗೆ ಭೇಟಿ ನೀಡಿ, ಬೆಳಿಗ್ಗೆ 8.30ಕ್ಕೆ ಸರ್ಕೀಟ್‌ಹೌಸ್‌ನಲ್ಲಿ ಸ್ಥಳೀಯ ಶಾಸಕರು ಹಾಗೂ ಗಣ್ಯರನ್ನು ಭೇಟಿ ಮಾಡುವರು. ಬೆಳಿಗ್ಗೆ 9ಕ್ಕೆ ಡಾ.ಅಂಬೇಡ್ಕರ್ ಭವನದಲ್ಲಿ ಜರುಗುವ ಜಿಲ್ಲಾ ಆದಿಜಾಂಬವ ಜಾಗೃತಿ ಸಮಾವೇಶ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, 9.30ಕ್ಕೆ ಜಿಲ್ಲಾ ಬ್ರಾಹ್ಮಣ ಸೇವಾ ಸಂಘದ ಸಮುದಾಯ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.