ADVERTISEMENT

ಪಾರಂಪರಿಕ ತಾಣ, ಹುಲಿ ಯೋಜನೆಗೆ ವಿರೋಧ

ತೀರ್ಥಹಳ್ಳಿ: ಹಸಲರ ಸಮಾವೇಶದಲ್ಲಿ ಸುಶೀಲಾ ಕೊರಗ ನಾಡಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 8:10 IST
Last Updated 12 ಡಿಸೆಂಬರ್ 2012, 8:10 IST

ತೀರ್ಥಹಳ್ಳಿ: ಪಶ್ಚಿಮಘಟ್ಟ ವಿಶ್ವ ಪಾರಂಪರಿಕಾ ತಾಣ, ಹುಲಿ ಯೋಜನೆ ಇತ್ಯಾದಿಗಳ ವಿರುದ್ಧ ಹೋರಾಟ ನಡೆಸಬೆಕಾದ ಅನಿವಾರ್ಯತೆ ಇದೆ ಎಂದು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲಾ ಕೊರಗ ನಾಡಾ ಅಭಿಪ್ರಾಯಪಟ್ಟರು.

ಈಚೆಗೆ ತಾಲ್ಲೂಕಿನ ಕನ್ನಂಗಿ ಗ್ರಾಮದ ಶಿಲೆಕುಣಿಯಲ್ಲಿ ನಡೆದ `ಹಸಲರ ಸಮಾವೇಶ ಮತ್ತು ಅರಣ್ಯ ಹಕ್ಕಿನ ಕಾರ್ಯಾಗಾರ'ದಲ್ಲಿ ಅವರು ಮಾತನಾಡಿದರು.

ಕರ್ನಾಟಕದ ಮೂಲ ಅರಣ್ಯ ಬುಡಕಟ್ಟುಗಳಾದ ಹಸಲರು, ಜೇನುಕುರುಬರು, ಎರವರು, ಭೇಟೆ ಕುರುಬರು, ಕೊರಗ, ಗೊಂಡ, ಸಿದ್ದಿ ಸಮುದಾಯ ಸೇರಿದಂತೆ 12 ಸಮುದಾಯಗಳು ಒಂದಾಗಿವೆ. ನಮ್ಮ ಅಸ್ಥಿತ್ವ ಎತ್ತಿ ಹಿಡಿಯಲು ಆದಿವಾಸಿ ವಿರೋಧಿ ನೀತಿಗಳನ್ನು ಖಂಡಿಸುವ ಅನಿವಾರ್ಯತೆ ಎದುರಾಗಿದೆ ಎಂದರು.

ಇಂದು ಬುಡಕಟ್ಟು  ಸಮುದಾಯದ ಒಟ್ಟು ವ್ಯವಸ್ಥೆಯನ್ನು ಅಂಚಿಗೆ ತಳ್ಳಲ್ಪಡಲಾಗುತ್ತಿದೆ. ಈ ಸಮುದಾಯ ಸಂಘಟನೆ, ಹೋರಾಟದ ಮೂಲಕ ಅಭಿವೃದ್ಧಿ ಸಾಧಿಸಬೇಕಿದೆ. ಮೇಲ್ವರ್ಗದ ಜನರಿಂದ ದೌರ್ಜನ್ಯಕ್ಕೆ ಒಳಗಾಗಿರುವ ನಮ್ಮನ್ನು ಶೋಷಣೆ ಮಾಡಲಾಗುತ್ತಿದೆ. ಆಳುವ ವರ್ಗಕ್ಕೆ ಹೋರಾಟದ ಮೂಲಕ ಉತ್ತರ ನೀಡಬೇಕಿದೆ ಎಂದು ಅವರು ನುಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಶ್ರೀನಿವಾಸ ನಾಯ್ಕ, ಹಸಲರು ತಾಲ್ಲೂಕಿನಲ್ಲಿ ಬುಡಕಟ್ಟು ಸಮುದಾಯ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿನ ಜನಪ್ರತಿನಿಧಿ ವ್ಯವಸ್ಥೆ ನಮ್ಮನ್ನು ಕತ್ತಲೆಯಲ್ಲಿಟ್ಟು ನಿರಂತರ ಶೋಷಣೆ ಮಾಡುತ್ತಿದೆ ಎಂದರು.

ಜ್ಞಾನಸಿದ್ದಿ ಯಲ್ಲಾಪುರ ಇವರು, ಅರಣ್ಯ ಹಕ್ಕಿನ ಕಾಯ್ದೆ ಕುರಿತು ಸಮಗ್ರ ಮಾಹಿತಿಯನ್ನು ಸಮುದಾಯದ ಜನರಿಗೆ ನೀಡಿದರು. ನಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದೇ ನಾವು ವಂಚಿತರಾಗುತ್ತಿದ್ದೇವೆ. ಇದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಮೂಲ ಅರಣ್ಯ ಬುಡಕಟ್ಟುಗಳ ನೇತೃತ್ವದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸ್ಥಳೀಯ ಮುಖಂಡರಾದ ಸೀತಾರಾಮ್ ಹಸಲರು, ಟಾಕಪ್ಪ ಹಸಲರು ಕನ್ನಂಗಿ, ಕರ್ನಾಟಕ ಮೂಲ ಅರಣ್ಯ ಬುಡಕಟ್ಟು ಒಕ್ಕೂಟದ ಸದಸ್ಯ ರಾಮಣ್ಣ ಹಸಲರು ಹಾಗೂ ಸಮಗ್ರ ಗ್ರಾಮೀಣ ಆಶ್ರಮದ ಕಾರ್ಯಕರ್ತ ಅಶೋಕ್ ಉಪಸ್ಥಿತರಿದ್ದರು.ಬಾಲರಾಜ್ ಹಸಲರು ಸ್ವಾಗತಿಸಿದರು. ಶಶಿಕಲಾ ಹಸಲರು ವಂದಿಸಿದರು. ಶ್ರೀಧರ ಕೊರಗನಾಡಾ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.