ADVERTISEMENT

ಪುಸ್ತಕ ಓದುವ ಸಂಸ್ಕೃತಿ ಕಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 5:30 IST
Last Updated 23 ಸೆಪ್ಟೆಂಬರ್ 2013, 5:30 IST

ಭದ್ರಾವತಿ:  ‘ ಜಾತ್ಯತೀತವಾಗಿ ಬೆಳೆಯುವ ಕಡೆ ಗಮನ ಕೊಡುವ ಅಗತ್ಯವಿದೆ’ ಎಂದು ಸಾಹಿತಿ, ಕನ್ನಡ ಪ್ರಾಧ್ಯಾಪಕ ಡಾ.ಎಚ್‌.ಟಿ. ಕೃಷ್ಣಮೂರ್ತಿ ಕರೆ ನೀಡಿದರು.

ಇಲ್ಲಿನ ಒಕ್ಕಲಿಗರ ಸಂಘ ಭಾನುವಾರ ಜಯಶ್ರೀ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.

ಪ್ರತಿ ಜನಾಂಗದಲ್ಲೂ ಸೃಜನಶೀಲತೆ ಅಡಗಿರುತ್ತದೆ. ಅದನ್ನು ವಿಮರ್ಶೆಗೆ ಒಳಪಡಿಸಿ ಚರ್ಚಿಸುವ ಮನೋಭಾವ ಹೊಂದಿದಾಗ ಮಾತ್ರ ಅದರ ಕುರಿತಾದ ಆಸಕ್ತಿ ಹೆಚ್ಚುತ್ತದೆ. ಇದಕ್ಕೆ ಅವಶ್ಯವಿರುವುದು ಪುಸ್ತಕ ಓದುವ ಪ್ರವೃತ್ತಿ ಬೆಳೆಸುವುದು ಎಂದು ಹೇಳಿದರು.

ಕುವೆಂಪು, ತೇಜಸ್ವಿ, ಬೆಸಗರಹಳ್ಳಿ ರಾಮಣ್ಣ, ನಾಗತಿಹಳ್ಳಿ ಚಂದ್ರಶೇಖರ್‌. ಹೀಗೆ ಹತ್ತು ಹಲವರ ಕೃತಿ ಪರಿಚಯಿಸುವ ಕೆಲಸ ನಡೆದಾಗ ಮಾತ್ರ ನಮ್ಮಲ್ಲಿನ ಚಿಂತನೆಯ ವೈಶಾಲ್ಯತೆ ಹೆಚ್ಚಲಿದೆ. ಹೀಗಾಗಿ ಮಕ್ಕಳಿಗೆ ಪುಸ್ತಕ ಕೊಡುಗೆ ನೀಡುವ ಕೆಲಸ ಮಾಡಿ ಎಂದರು.

ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಗುಣನಾಥ ಸ್ವಾಮೀಜಿ ಮಾತನಾಡಿ ‘ಎಲ್ಲ ಜನರ ಬದುಕಿಗೆ ಅವಶ್ಯವಿರುವ ಬೆಳೆಯನ್ನು ನೀಡುವ ಒಕ್ಕಲುತನ ಬದುಕು ನಡೆಸಿರುವ ಜನಾಂಗ ಮನುಷ್ಯ ಬದುಕಿಗೆ ಮೇಲ್ಪಂಕ್ತಿಯ ಕೊಡುಗೆ ನೀಡಿದೆ. ಇದು ಈ ಸಮಾಜದ ವೈಶಿಷ್ಟ್ಯ’ ಎಂದು ಹೇಳಿದರು.

ಶಾಸಕ ಎಂ.ಜೆ. ಅಪ್ಪಾಜಿ, ಜಿಲ್ಲಾ ಕಸಾಪ ಅಧಕ್ಷ ಡಿ. ಮಂಜುನಾಥ್‌, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಡಿ.ವಿ. ರಮೇಶ್‌, ಸಂಘದ ಮಹಾಪೋಷಕರಾದ ಕಾಳೇಗೌಡ, ಕೆ.ಬಿ.ಡಿ. ಗೌಡ, ಎ.ಬಿ. ನಂಜಪ್ಪ, ಎನ್‌.ಜಿ. ನಾಗರಾಜ್‌, ಮಾದೇಗೌಡ, ಎಸ್‌.ಕೆ. ಚನ್ನೇಗೌಡ, ಅಂಜನಪ್ಪ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಎಸ್‌.ಸಿ. ಜಯರಾಮ್‌ ಅಧ್ಯಕ್ಷತೆ ವಹಿಸಿದ್ದರು. ಪಂಚಮ್‌ ಪ್ರಾರ್ಥಿಸಿದರು, ಸುಮಾ, ಮಂಜುಳಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.