ADVERTISEMENT

ಪ್ರಗತಿಗೆ ಸಿಂಡಿಕೇಟ್ ಸದಸ್ಯರು ಪ್ರೇರಕಶಕ್ತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 6:10 IST
Last Updated 24 ಜನವರಿ 2012, 6:10 IST

 ಶಿವಮೊಗ್ಗ: ವಿಶ್ವವಿದ್ಯಾಲಯದ ಪ್ರಗತಿಗೆ ಸಿಂಡಿಕೇಟ್ ಸದಸ್ಯರುಗಳು ಪ್ರೇರಕಶಕ್ತಿಯಾಗಬೇಕು ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಎಸ್.ಎ. ಬಾರಿ ಅಭಿಪ್ರಾಯಪಟ್ಟರು.


ಕುವೆಂಪು ವಿಶ್ವವಿದ್ಯಾಲಯದಲ್ಲಿ ಸೋಮವಾರ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರುಗಳ ಸಮಾವೇಶದ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಂಡಿಕೇಟ್, ವಿಶ್ವವಿದ್ಯಾಲಯದ ಆತ್ಮ ಇದ್ದಂತೆ. ಅದರ ಸಲಹೆ-ಸೂಚನೆ ಮೇರೆಗೆ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.

ವಿಶ್ವವಿದ್ಯಾಲಯಗಳು ರಾಷ್ಟ್ರದ ಆಸ್ತಿಗಳು; ಅವುಗಳ ಬೆಳವಣಿಗೆಯಿಂದ ಮಾನವ ಸಂಪನ್ಮೂಲ ಅಭಿವೃದ್ಧಿಯಾಗುತ್ತದೆ. ಪರಿಣಾಮ ರಾಷ್ಟ್ರದ ಅಭಿವೃದ್ಧಿಯಾಗುವುದು ಎಂದು ಅವರು ಅಭಿಪ್ರಾಯಪಟ್ಟರು.
ಅತಿಥಿ ವಿಧಾನ ಪರಿಷತ್ತು ಸದಸ್ಯ ಪ್ರೊ.ಪಿ.ವಿ. ಕೃಷ್ಣಭಟ್ ಮಾತನಾಡಿ, ಸಿಂಡಿಕೇಟ್ ಸದಸ್ಯರು ವಿಶ್ವವಿದ್ಯಾಲಯದ ಸಮಸ್ಯೆಗಳನ್ನು ನಿವಾರಿಸಿ, ಶಿಕ್ಷಣದ ಪ್ರಗತಿಗೆ ಪ್ರೋತ್ಸಾಹಿಸಬೇಕು.

ವಿಶ್ವವಿದ್ಯಾಲಯದ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸವೇ ಪ್ರಮುಖ ಗುರಿಯಾಗಿಸಿಕೊಂಡು ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್. ಹೆಗಡೆ ಮಾತನಾಡಿ,  ಕರ್ನಾಟಕ ವಿಶ್ವವಿದ್ಯಾಲಯಗಳ ಇತಿಹಾಸದಲ್ಲಿ ಈ ಸಮಾವೇಶ ದಾಖಲಾರ್ಹವಾದುದು. ಈ ತೆರನಾದ ಕಾರ್ಯಕ್ರಮಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತದೆ ಎಂದರು.
ಸಿಂಡಿಕೇಟ್ ಸದಸ್ಯ ಧರ್ಮಪ್ರಸಾದ್ ಮಾತನಾಡಿ, ವಿಶ್ವವಿದ್ಯಾಲಯಗಳ ಭೌಗೋಳಿಕ ಎಲ್ಲೆಯು ಪ್ರತಿಭಾವಂತ ವಿದ್ಯಾರ್ಥಿಗಳ ಆಸಕ್ತಿಗೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ಸುಧಾರಣೆಯಾಗಬೇಕು ಎಂದು ಹೇಳಿದರು.

ಶಿಕ್ಷಣತಜ್ಞ ಪ್ರೊ.ಆರ್.ಎಲ್.ಎಂ. ಪಾಟೀಲ ಮಾತನಾಡಿದರು. ಸಮಾವೇಶದ ಸಂಚಾಲಕ ಪ್ರೊ.ಎಂ. ವೆಂಕಟೇಶ್ವರಲು, ಕುಲಸಚಿವ ಪ್ರೊ.ಟಿ.ಆರ್. ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT