ADVERTISEMENT

ಪ್ರಪಾತದ ಹಾದಿಯಲ್ಲಿ ನಿತ್ಯ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 21 ಜನವರಿ 2011, 7:30 IST
Last Updated 21 ಜನವರಿ 2011, 7:30 IST

ಭದ್ರಾವತಿ: ಕಿರಿದಾದ ರಸ್ತೆ, ಒಂದು ಬದಿಯಲ್ಲಿ ಸುಮಾರು 10 ಅಡಿ ಆಳದಲ್ಲಿ ಹರಡಿರುವ ತೋಟದ ಸಾಲು, ಮೊತ್ತೊಂದು ಬದಿಯಲ್ಲಿ ಮೂರು ಎಕರೆ ವಿಶಾಲ ಜಾಗದಲ್ಲಿ ವಿಸ್ತರಿಸಿರುವ ಕೆರೆ, ಎರಡು ಬದಿಯಲ್ಲೂ ತಡೆಗೋಡೆ ಮಾತ್ರ ಇಲ್ಲ.-ಇದು ಎದುರಾಗುವುದು ಭದ್ರಾವತಿ-ಚನ್ನಗಿರಿ ರಸ್ತೆಯಲ್ಲಿ.

ಕೂಡ್ಲಿಗೆರೆ ಕಡೆಯಿಂದ ಮುಂದೆ ಸಾಗಿ ದೊಡ್ಡದಾದ ತಿರುವಿನಲ್ಲಿ ಸಿಗುವ ದ್ಯಾಮಣ್ಣನಕೆರೆ ಚಿತ್ರಣ ಇರುವುದೇ ಹೀಗೆ. ದಿನನಿತ್ಯ ಲಾರಿ, ಬಸ್, ಟ್ರ್ಯಾಕ್ಟರ್... ಹೀಗೆ ಹತ್ತು ಹಲವು ಭಾರೀ ವಾಹನಗಳ ಮಧ್ಯೆ ದ್ವಿಚಕ್ರ ವಾಹನಗಳು ದಿನದ 24 ಗಂಟೆ ಸಂಚರಿಸುವ ಸ್ಥಳ ಇದಾಗಿದೆ.

ಸುಮಾರು 10ರಿಂದ 12ಅಡಿ ವಿಸ್ತೀರ್ಣದ ಕಿರು ರಸ್ತೆಯ ಎರಡು ಬದಿಯಲ್ಲಿ ಅಪಾಯಕ್ಕೆ ಆಹ್ವಾನ ನೀಡುವ ಸ್ಥಿತಿಯಂತೂ ಇದೆ. ರಾತ್ರಿ ಹೊತ್ತು ತಿರುವಿನಲ್ಲಿ ಇದು ಸಹ ಸ್ಟಷ್ಟವಾಗಿ ಕಾಣುವುದಿಲ್ಲ. ಸಾಲದ್ದಕ್ಕೆ ಎರಡು ಬದಿಯ ಅಪಾಯದ ಅಂಚಿನಲ್ಲಿ ಗಿಡಗಂಟಿಗಳ ಸಾಲು ಹೇರಳವಾಗಿ ಬೆಳೆದಿರುವುದು ಕೆರೆ, ತೋಟದ ಇರುವಿಕೆಯನ್ನು ಮುಚ್ಚಿ ಹಾಕುತ್ತದೆ.

ಇಂತಹ ಕ್ಲಿಷ್ಟ ಸನ್ನಿವೇಶದ ಚಿತ್ರಣ ಹೊತ್ತಿರುವ ಈ ತಿರುವು ರಸ್ತೆಯಲ್ಲಿ ಸಂಚರಿಸುವ ಮಂದಿಗೆ ಯಾವುದೇ ಮಾರ್ಗಸೂಚಿ ಫಲಕಗಳು ಹಾಕದಿರುವುದು ಮತ್ತಷ್ಟು ತೊಂದರೆಗೆ ಕಾರಣವಾಗಿದೆ. ದಿನನಿತ್ಯ ಚನ್ನಗಿರಿಗೆ ತೆರಳುವ ಉಪನ್ಯಾಸಕ ಭುವನೇಶ್ವರ್ ‘ಎರಡು ಬದಿಯ ಪ್ರಪಾತದ ಹಾದಿಯಲ್ಲಿ ದಿನನಿತ್ಯ ಬಸ್ಸಿನಲ್ಲಿ ಸಾಗುತ್ತೇವೆ. ವಿಶಾಲವಾದ ಕೆರೆಯ ಮಗ್ಗುಲಲ್ಲಿ ಇರಬೇಕಾದ  ತಡೆಗೋಡೆ  ಇಲ್ಲದಿರುವುದು  ಸಾಕಷ್ಟು ಚರ್ಚೆಗೆ ಕಾರಣವಾಗಿದೆ’  ಎನ್ನುತ್ತಾರೆ.

ಸಾಕಷ್ಟು  ಬಳಸು ಹಾದಿ ಹೊತ್ತಿರುವ ಈ ಕೆರೆ ಪ್ರದೇಶದಲ್ಲಿ ಒಂದಿಷ್ಟು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಇಲ್ಲವಾದರೆ ಮುಂದಿನ ದಿನದಲ್ಲಿ ಸಾಕಷ್ಟು ತೊಂದರೆ ಎದುರಾಗುತ್ತದೆ ಎನ್ನುತ್ತಾರೆ ಮಂಜುನಾಥ್.

ಒಟ್ಟಿನಲ್ಲಿ ಅಪಾಯದ ಆಹ್ವಾನದ ಸ್ಥಿತಿಯಲ್ಲಿರುವ ದ್ಯಾಮಣ್ಣನ ಕೆರೆ ರಸ್ತೆಯಲ್ಲಿ ಸಾಕಷ್ಟು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಮುಂದಾಗಲಿ ಎಂಬುದು ನಾಗರಿಕರ ಒತ್ತಾಯವಾಗಿದೆ. 
         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.