ADVERTISEMENT

ಬಾಲಕನ ಕೊಲೆ ಪ್ರಕರಣ: ಮಹತ್ವದ ಸುಳಿವು

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2012, 5:55 IST
Last Updated 8 ನವೆಂಬರ್ 2012, 5:55 IST

ಸಾಗರ: ತಾಲ್ಲೂಕಿನ ಹಳೇ ಇಕ್ಕೇರಿ ಗ್ರಾಮದ ಜಯಂತ್ ಯಾನೆ ಜಯರಾಮ್ ಎಂಬ ಬಾಲಕನ ಕೊಲೆ  ಪ್ರಕರಣವನ್ನು ಭೇದಿಸುವಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಾಲಕನ ಮಲತಾಯಿ ಸರಸ್ವತಿ ತನ್ನ ಪ್ರಿಯಕರ ಭದ್ರಾವತಿ ತಾಲ್ಲೂಕು ಗುಡಮಘಟ್ಟ ಗ್ರಾಮದ ರವಿ ಯಾನೆ ರೇವಣೇಶ ಎಂಬಾತನೊಂದಿಗೆ ಸೇರಿಕೊಂಡು ಜಯಂತ್‌ನನ್ನು ಕೊಲೆ ಮಾಡಿರುವುದಾಗಿ ಪೊಲೀಸರ ಪ್ರಾಥಮಿಕ  ಹಂತದ ತನಿಖೆಯಿಂದ ತಿಳಿದುಬಂದಿದೆ.

ಯಡಜಿಗಳಮನೆಯ ಪ್ರೌಢಶಾಲೆ ಯಲ್ಲಿ 8ನೇ ತರಗತಿ ಓದುತ್ತಿದ್ದ ನಾರಾಯಣ ಗೌಡರ ಮಗ ಜಯಂತ್ ಕಳೆದ ವಿಜಯದಶಮಿ ಹಬ್ಬದ ದಿನದಿಂದ ನಾಪತ್ತೆಯಾಗಿದ್ದು, ಮಜ್ಜಿಗೆರೆ ಕಾಡಿನಲ್ಲಿ ಅ. 29ರಂದು ಆತನ ಶವ  ಪತ್ತೆಯಾಗಿತ್ತು. ಶವದ ಬಳಿ ವಿಷದ ಬಾಟಲ್‌ಗಳು ದೊರಕಿದ್ದು  ಬಾಲಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಭಾವನೆ ಮೂಡಿಸುವ ಸಲುವಾಗಿ ಕೊಲೆಗಡುಕರು ಆ ರೀತಿ ಮಾಡಿದ್ದರು ಎನ್ನಲಾಗಿದೆ.

ನಾರಾಯಣ ಗೌಡರ ಆಸ್ತಿ ಲಪಟಾಯಿಸುವ ಸಂಚಿನ ಭಾಗವಾಗಿ ಜಯಂತ್‌ನ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ. ಪೊಲೀಸರು ಈಗಾಗಲೇ ಸರಸ್ವತಿ ಹಾಗೂ ರವಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದು ಗುರುವಾರ ಪ್ರಕರಣದ ಸಂಪೂರ್ಣ ವಿವರ ಬೆಳಕಿಗೆ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.