ADVERTISEMENT

ಬಾಲ್ಯ ವಿವಾಹ ಶೋಷಣೆಯ ಪ್ರತಿರೂಪ

ಬಾಲ್ಯ ವಿವಾಹ ನಿಷೇಧ ಕುರಿತ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 7:05 IST
Last Updated 10 ಡಿಸೆಂಬರ್ 2013, 7:05 IST

ಸಾಗರ: ಮಹಿಳೆಯರನ್ನು ಯಾವ ರೀತಿ ಶೋಷಿಸಬಹುದು ಎನ್ನುವುದಕ್ಕೆ ಬಾಲ್ಯ ವಿವಾಹ ಕೂಡ ಒಂದು ಉದಾಹರಣೆಯಾಗಿದ್ದು ಬಾಲ್ಯ ವಿವಾಹ ಎನ್ನುವುದು ಮಹಿಳಾ ಶೋಷಣೆಯ ಪ್ರತಿರೂಪವಾಗಿದೆ ಎಂದು ತಹಶೀಲ್ದಾರ್‌ ಸಾಜಿದ್ ಅಹ್ಮದ್‌ ಮುಲ್ಲಾ ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೋಮವಾರ ಏರ್ಪಡಿಸಿದ್ದ ಬಾಲ್ಯ ವಿವಾಹ ನಿಷೇಧ ಕುರಿತ ತರಬೇತಿ ಕಾರ್ಯಾಗಾರ  ಉದ್ಘಾಟಿಸಿ ಮಾತನಾಡಿದ ಅವರು ಬಾಲ್ಯ ವಿವಾಹದಿಂದ ಹೆಚ್ಚಿನ ತೊಂದರೆಗೆ ಒಳಗಾಗುವವರು ಮಹಿಳೆಯರೆ ಎಂಬ ಅರಿವು ಎಲ್ಲರಲ್ಲಿ ಮೂಡಬೇಕಿದೆ ಎಂದರು.

ಕಾನೂನಿನ ಪ್ರಕಾರ 18 ವರ್ಷ ತುಂಬದ ಯುವತಿ ಹಾಗೂ 21 ವರ್ಷ ತುಂಬದ ಪುರುಷ ಮದುವೆಯಾದರೆ ಅದಕ್ಕೆ ಮಾನ್ಯತೆಯೆ ಇಲ್ಲ. ಈ ಬಗ್ಗೆ ಕಾಯ್ದೆ ಜಾರಿಯಲ್ಲಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಬಾಲ್ಯ ವಿವಾಹ ನಡೆಯುತ್ತಿವೆ. ಇದನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ ನಡೆಸಬೇಕಿದೆ ಎಂದು ಹೇಳಿದರು.

  ಯಾವುದೆ ವ್ಯಕ್ತಿ ವಿವಾಹವಾಗುವ ಮುನ್ನ ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕವಾಗಿಯೂ ಬೆಳವಣಿಗೆ ಹೊಂದಿರಬೇಕು. ಮುಂದಿನ ಜೀವನದ ಆಗು ಹೋಗುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ವಿವೇಕ ಇದ್ದಾಗ ಮಾತ್ರ ವೈವಾಹಿಕ ಜೀವನ ಸುಗಮವಾಗಿ ಸಾಗಲು ಸಾಧ್ಯ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಿ.ಜಿ.ಜೋಯಪ್ಪ ಮಾತನಾಡಿ ಮೂರು ತಿಂಗಳಿಗೊಮ್ಮೆ ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಪಿ.ಅಚ್ಚುತ್‌, ವನಮಾಲ, ಅಕ್ಷತಾ, ರಘುನಾಥ್‌ ಹಾಜರಿದ್ದರು. ವಿದ್ಯಾ .ಎಸ್‌.ಹೆಗಡೆ ಪ್ರಾರ್ಥಿಸಿದರು. ಮಲ್ಲಿಕಾರ್ಜುನ್‌ ಸ್ವಾಗತಿಸಿದರು. ಲಲಿತ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.