ADVERTISEMENT

ಭೂಮಿ ತಾಯಿಗೆ ಚರಗ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 8:31 IST
Last Updated 6 ಅಕ್ಟೋಬರ್ 2017, 8:31 IST

ಶಿಕಾರಿಪುರ: ಸ್ನೇಹಿತರು ಹಾಗೂ ಕುಟುಂಬ ವರ್ಗದ ಸದಸ್ಯರ ಜತೆ ಭೂಮಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ ಭೂಮಿ ಹುಣ್ಣಿಮೆ ಹಬ್ಬವನ್ನು ತಾಲ್ಲೂಕಿನ ರೈತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಸೀಗೆ ಹುಣ್ಣಿಮೆಯ ಸಮೃದ್ಧಿಯ ದಿನವಾದ ಗುರುವಾರ ಸೂರ್ಯ ಉದಯಿಸುವ ಮುನ್ನ ಹಲವು ರೈತರು ತಮ್ಮ ಜಮೀನುಗಳಿಗೆ ತೆರಳಿ ಚರಗ ಚೆಲ್ಲುವ ಮೂಲಕ ಭೂಮಿ
ಹುಣ್ಣಿಮೆ ಹಬ್ಬದ ಧಾರ್ಮಿಕ ಕಾರ್ಯಗಳನ್ನು ಆರಂಭಿಸಿದರು.

ನಂತರ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ರೈತರು ತಮ್ಮ ಕುಟುಂಬ ವರ್ಗ ಹಾಗೂ ಸ್ನೇಹಿತರೊಂದಿಗೆ ಎತ್ತಿನ ಬಂಡಿ, ಟಿಲ್ಲರ್‌, ಟ್ರ್ಯಾಕ್ಟರ್‌, ಕಾರು ಸೇರಿದಂತೆ ವಿವಿಧ ವಾಹನಗಳ ಮೂಲಕ ಕೃಷಿ ಭೂಮಿಗೆ ತೆರಳಿದರು. ನಂತರ ತಮ್ಮ ಕೃಷಿ ಭೂಮಿಯಲ್ಲಿ ಬೆಳೆದ ಬೆಳೆಗೆ ಸೀರೆ, ಕುಪ್ಪಸ ಬಟ್ಟೆ ಹಾಗೂ ಆಭರಣಗಳನ್ನು ತೊಡಿಸಿ, ಮನೆಯಿಂದ ತಯಾರಿಸಿ ತಂದ ತಿಂಡಿ ತಿನಿಸುಗಳ ನೈವೇದ್ಯವನ್ನು ಭೂಮಿ ತಾಯಿಗೆ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿದರು.

ADVERTISEMENT

ಕೋಣಂದೂರು: ಈ ಸಲದ ತೃಪ್ತಿದಾಯಕ ಹಿಂಗಾರು ಮಳೆಯಿಂದಾಗಿ ಗುರುವಾರ ಆಚರಿಸಿದ ಭೂಮಿಹುಣ್ಣಿಮೆ ಹಬ್ಬ ಸಂಭ್ರಮದಿಂದ ಕಳೆಗಟ್ಟಿತ್ತು. ಬೆವರಿನ ಸಂಸ್ಕೃತಿ ಮತ್ತು ಮಣ್ಣಿನ ಪ್ರೀತಿಯಿಂದ ರೈತರು ಅನಾದಿ ಕಾಲದಿಂದಲೂ ನಡೆಸಿಕೊಂಡು ಬಂದ ನಿಸರ್ಗದ ಹಬ್ಬ ಅರ್ಥಪೂರ್ಣವೆನಿಸಿತು.

ಮುಂಜಾನೆಯಿಂದಲೇ ತುಸು ಮಂಜಿನಿಂದ ಕವಿದಿದ್ದ ಮಲೆನಾಡ ಪರಿಸರ ಈ ಮಣ್ಣಿನ ಹಬ್ಬದಿಂದಾಗಿ ಉಲ್ಲಸಿತಗೊಂಡಿತ್ತು. ರಾತ್ರಿಯಿಡೀ ನಿದ್ದೆ ಬಿಟ್ಟು ತಯಾರಿಸಿದ ಎಲೆಗಡುಬು, ಅಮಟೆ ಕಾಯಿ ಪಲ್ಯ, ಅತ್ರಾಸ, ಸೀಖೆದುಂಡೆ, ಹೋಳಿಗೆ, ಕಜ್ಜಾಯ, ವಿವಿಧ ಸೊಪ್ಪುಗಳಿಂದ ತಯಾರಿಸಿದ ಪದಾರ್ಥಗಳನ್ನು ಪರಸ್ಪರ ಸೌಹಾರ್ದ ಭಾವದಿಂದ ನೆರೆಹೊರೆಯವರು ಫಸಲಿನ ನಡುವೆ ಹಂಚಿ ತಿನ್ನುತಿದ್ದ ದೃಶ್ಯ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.