ರಿಪ್ಪನ್ಪೇಟೆ: ಘಟ್ಟದ ಕೆಳಗೆ ಹೆಸರುವಾಸಿಯಾದ ಗಂಡು ಕಲೆ ಯಕ್ಷಗಾನ ಇದೀಗ ಘಟ್ಟದ ಮೇಲೆ ನೆಲೆಯೂರುತ್ತಿರುವುದು ಶ್ಲಾಘನೀಯ ಎಂದು ಕೆಂಜಿಗಾಪುರ ಶ್ರೀಧರ್ ಭಟ್ ಹೇಳಿದರು.
ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಳಕೋಡು ಗ್ರಾಮದಲ್ಲಿ ಜೆ.ಸಿ. ಜಯಪ್ರಕಾಶ್ ಭಟ್ ಮನೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಕವಿರತ್ನ ಕಾಳಿದಾಸ’ ಮತ್ತು ‘ಚಂದ್ರಹಾಸ’ ಪೌರಾಣಿಕ ಕಥಾ ಹಂದರದ ಯಕ್ಷಗಾನ ಬಯಲಾಟದಲ್ಲಿ ಕಲಾವಿದರನ್ನು ಸನ್ಮಾನಿಸಿ ಅವರು ಮಾತನಾಡಿದರು.
ತೆಂಕು–ಬಡಗು ಯಕ್ಷಗಾನ ಮೇಳಗಳ ಮೂಲಕ ಪರಿಚಯವಾದ ಇಂತಹ ಜನಪದ ಕಲಾವಂತಿಕೆ ನೇಪಥ್ಯಕ್ಕೆ ಸರಿಯುವ ಮುನ್ನ ಮತ್ತೆ ಅದಕ್ಕೆ ಜೀವ ತುಂಬುವ ಕೆಲಸ ಕಾರ್ಯದಲ್ಲಿ ಅಲಸೆ ದೇವಸ್ಥಾನ ಸಮಿತಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ನಾಗರಕೊಡಿಗೆಯ ಎನ್.ಬಿ. ನಾಗೇಶ ಭಟ್ ಹಾಗೂ ಕಲ್ಕೆರೆ ನಟೇಶ, ಪ್ರಭಾಕರ ಹೆಗಡೆ ಅವರ ಭಾಗವತಿಕೆ, ಸಿಡಿಯಾ ನವನೀತ ಶಾನುಭೋಗ ಅವರ ಸಂಗೀತ ಸಂಯೋಜನೆ ಮತ್ತು ಹೊನ್ನಕುಡಿಗೆ ಗಣೇಶ್, ಕಾರ್ಗಲ್ ಮೇಘರಾಜ್, ಯಡ್ಲುಕೊಡಿಗೆ ರಾಘವೇಂದ್ರ ಭಟ್ ಚಂಡೆ– ಮದ್ದಲೆಯಲ್ಲಿ ಸಹಕರಿಸಿದರು. ಚಪ್ಪರದ ಮನೆ ರಾಮಚಂದ್ರ ಹೆಗಡೆ ಹಾಸ್ಯಗಾರರಾಗಿದ್ದರು. ಸ್ತ್ರೀ ಪಾತ್ರದಲ್ಲಿ ಕಿಗ್ಗ ಸುಂದರೇಶ, ಆಲ್ಮನೆ ಚಂದ್ರಶೇಖರ್, ವೀರಭದ್ರಗೌಡ, ಸಜ್ಜನ್ಕುಮಾರ್ ನಾಗರ ಕೂಡಿಗೆ ಇದ್ದರು. ಮುಮ್ಮೇಳದಲ್ಲಿ ಸೀತೂರು ಅಣ್ಣಾಜಿರಾವ್, ಮೇಳಿಗೆ ಸತ್ಯನಾರಾಯಣ ರಾವ್, ಕರೀಮನೆ ಸುಧಾಕರ ರಾವ್, ರವಿ ರಾಜ್ ಅಭಿನಯಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.